ಡೈಲಿ ವಾರ್ತೆ: 19/MAY/2025

ಭಾರಿ ಮಳೆಗೆ ಬೆಂಗಳೂರು ಹೈರಾಣ, ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು, ಹಲವೆಡೆ ಸಂಚಾರಕ್ಕೆ ಅಡಚಣೆ.!

ಬೆಂಗಳೂರು: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದೆ. ಭಾನುವಾರ ಸಂಜೆ ಹಾಗೂ ರಾತ್ರಿ ಕೂಡ ಚಾಮರಾಜಪೇಟೆ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೇ ಅಲ್ಲದೆ, ರಾತ್ರಿಯಿಡೀ ಮಳೆ ಸುರಿದಿದೆ. ಶನಿವಾರ ರಾತ್ರಿ ಸುರಿದಿದ್ದ ಮಳೆಗೆ ರಸ್ತೆಗಳಲ್ಲಿ ಗುಂಡಿಗಳು ಬಾಯ್ತೆರೆದಿದ್ದವು. ಗ್ರೇಟರ್ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದ್ದು, ಕಿತ್ತುಹೋಗಿರುವ ರಸ್ತೆಗಳನ್ನು ಸರಿಪಡಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಇದರ ಮಧ್ಯೆ ಇದೀಗ ಭಾನುವಾರ ರಾತ್ರಿ ಇಡೀ ಸುರಿದ ಮಳೆ ಮತ್ತಷ್ಟು ಅಧ್ವಾನ ಮಾಡಿಹಾಕಿದೆ.

ಹೆಬ್ಬಾಳ, ಗೊರಗುಂಟೆಪಾಳ್ಯ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಗಿದೆ.

ಭಾನುವಾರ ರಾತ್ರಿ ಸುರಿದ ಧಾರಾಕಾರ ಸುರಿದ ಮಳೆಗೆ ವಾಹನ ಸವಾರರು ಪರದಾಡಿದರು. ಭಾನುವಾರ ಎಂದು ಹೊರಗೆ ಬಂದಿದ್ದವರೆಲ್ಲ ಫಜೀತಿ ಅನುಭವಿಸಿದ್ದಾರೆ.
ಶನಿವಾರ ಸುರಿದಿದ್ದ ಮಳೆಗೆ ಸಾಯಿ ಲೇಔಟ್ ಜನರು ಇನ್ನೂ ಪರದಾಡುತ್ತಿದ್ದಾರೆ. ಇಡೀ ಏರಿಯಾಗೇ ಏರಿಯಾನೇ ಜಲಾವೃತಗೊಂಡಿದೆ. ರಸ್ತೆ ತುಂಬ ನೀರು, ಮನೆಗಳಿಗೂ ನೀರು ನುಗ್ಗಿ ಸಾಯಿಲೇಔಟ್​ ಕೆರೆಯಂತಾಗಿದೆ. ರಾತ್ರಿಯಿಡಿ ಜಾಗರಣೆ ಮಾಡಿ ಬೆಳಗ್ಗೆಯಾದ್ರೂ ಮನೆಗಳಿಗೆ ನುಗ್ಗಿದ್ದ ರಾಜಕಾಲುವೆ ನೀರು ತಗ್ಗದೇ ನಿವಾಸಿಗಳು ಹಿಂಸೆ ಅನುಭವಿಸಿದರು.