ಡೈಲಿ ವಾರ್ತೆ: 22/MAY/2025

ತಾಜ್ ಮಹಲ್ ಮಾದರಿಯಲ್ಲೇ ಉಳ್ಳಾಲ ಹೊಸ ಮಸೀದಿ

ಮಂಗಳೂರು: ಜಗದ್ವಿಖ್ಯಾತ ತಾಜ್ ಮಹಲ್ ಮಾದರಿ
ಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಉಳ್ಳಾಲದಲ್ಲಿ ಅತ್ಯಾಕರ್ಷಕ ಮಸೀದಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ಸಂಪೂರ್ಣ ಅಮೃತಶಿಲೆ (ಮಾರ್ಬಲ್)ಯಿಂದ ರೂಪುಗೊಳ್ಳುವ ಜತೆಗೆ ಮುಂಭಾಗದಲ್ಲಿ ವಿಶಾಲ ನೀರಿನ ಕೊಳ ಇರಲಿದೆ.
ಉಳ್ಳಾಲದಲ್ಲಿ ಪ್ರಸ್ತುತ ಇರುವ ಇತಿಹಾಸ ಪ್ರಸಿದ್ಧ ಜುಮಾ ಮಸೀದಿಯನ್ನು ತೆರವುಗೊಳಿಸಿ ಅದೇ ಜಾಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಹೊಸ ಮಸೀದಿ ನಿರ್ಮಾಣಗೊಳ್ಳಲಿದೆ.
ಯೋಜನಾವರದಿ ಸಿದ್ಧಪಡಿಸಲಾಗಿದ್ದು, ಶೀಘ್ರ ನಿರ್ಮಾಣ ಆರಂಭವಾಗಲಿದೆ.

ತಾಜ್ ಮಹಲ್‌ನಲ್ಲಿರುವಂತೆ ಪ್ರಾಚೀನ ವಾಸ್ತು ಶಿಲ್ಪ ಶೈಲಿಯನ್ನು ನೂತನ ಮಸೀದಿಯಲ್ಲಿ ಬಳಸಲಾಗುತ್ತದೆ. ಈಗಾಗಲೇ ನೀಲ ನಕ್ಷೆಯನ್ನು ದುಬೈ, ಗೋವಾ, ಆಂಧ್ರಪ್ರದೇಶ, ಕರ್ನಾಟಕದ ವಾಸ್ತು ಶಿಲ್ಪಿಗಳು ಸಿದ್ಧಪಡಿಸಿದ್ದಾರೆ. 8 ಮಿನಾರ್, 6 ಗುಂಬಜ್, 5 ಕಡೆ ಪ್ರವೇಶ ದ್ವಾರಗಳನ್ನು ಮಸೀದಿ ಒಳಗೊಳ್ಳಲಿದೆ. ನೆಲ ಹಾಗೂ ಮೊದಲ ಮಹಡಿ 14 ಅಡಿ ಎತ್ತರವಿದ್ದು, ಎರಡನೇ ಅಂತಸ್ತು 13 ಅಡಿ ಸೇರಿದಂತೆ ಒಟ್ಟು 40 ಅಡಿ ಎತ್ತರವಿರಲಿದೆ ಎಂದು ಆಡಳಿತ ಸಮಿತಿಯವರು ತಿಳಿಸಿದ್ದಾರೆ. ನೆಲ ಹಾಗೂ ಎರಡು ಅಂತಸ್ತಿನಲ್ಲಿ ಪ್ರಾರ್ಥನೆಗೆ ಜಾಗ ಇರಲಿದೆ. ನೆಲ ಮಹಡಿಯಲ್ಲಿ ಧರ್ಮಗುರುಗಳ ಪ್ರವಚನಕ್ಕೂ ಸ್ಥಳಾವಕಾಶ ಕಲ್ಪಿಸಲಾಗುವುದು.

ಅಮೃತಶಿಲೆ ಗೋಡೆ:
ಗೋಡೆಗಳಿಗೆ ಪೈಂಟಿಂಗ್ ಬದಲಾಗಿ ಒಳಾಂಗಣ ಹಾಗೂ ಹೊರಾಂಗಣಕ್ಕೆ ಅಮೃತಶಿಲೆಯನ್ನೇ ಬಳಸಲಾಗುವುದು.
ರಾಸಾಯನಿಕಗಳಿಲ್ಲದೇ ನೈಸರ್ಗಿಕವಾಗಿ ನಿರ್ಮಿಸಲು ಯೋಜಿಸಲಾಗಿದೆ. ಮಸೀದಿಯ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಮುಂಭಾಗದಲ್ಲಿ 40 ಅಡಿ ಅಗಲ, 70 ಅಡಿ ಉದ್ದ ಹಾಗೂ ಒಂದೂವರೆ ಅಡಿ ಆಳದ ಕೊಳ ನಿರ್ಮಿಸಲಾಗುತ್ತದೆ.

10 ಸಾವಿರ ಜನರಿಗೆ ಪ್ರಾರ್ಥನೆಗೆ ವ್ಯವಸ್ಥೆ:
1 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಮಸೀದಿಯಲ್ಲಿ ಏಕಕಾಲದಲ್ಲಿ 10 ಸಾವಿರ ಜನ ಪ್ರಾರ್ಥಿಸುವ ಸ್ಥಳಾವಕಾಶ ಇರಲಿದೆ.

ದಕ್ಷಿಣ ಭಾರತದ ಅಜ್ಮೀರ್:
ಉಳ್ಳಾಲ ದರ್ಗಾ: ರಾಜಸ್ಥಾನದ ಅಜ್ಮೀರ್ ನಲ್ಲಿರುವುದು ದೇಶದಲ್ಲೇ ಅತೀ ದೊಡ್ಡ ದರ್ಗಾ. ದೇಶದ ಪ್ರಧಾನಿಗಳು ಅಧಿಕಾರಕ್ಕೆ ಬಂದಾಕ್ಷಣ ಅಲ್ಲಿಗೆ ಭೇಟಿ ನೀಡುತ್ತಾರೆ ಅಥವಾ ಕಾಣಿಕೆ ನೀಡುತ್ತಾರೆ. ಅದರ ಬಳಿಕ ಎರಡನೇ ಅತೀ ದೊಡ್ಡ ದರ್ಗಾ ಇರುವುದು ಉಳ್ಳಾಲದಲ್ಲಿ.
ಐದು ಶತಮಾನಗಳಿಗೂ ಅಧಿಕ ಇತಿಹಾಸ ಹೊಂದಿದ ಉಳ್ಳಾಲ ಮಸೀದಿಯಲ್ಲಿರುವ ಸೈಯದ್ ಮದನಿ ದರ್ಗಾ ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ದಿ. ಪ್ರತೀ 5 ವರ್ಷಗಳಿಗೊಮ್ಮೆ ಇಲ್ಲಿ ಉರೂಸ್ ನಡೆಯುತ್ತದೆ.

ತಾಜ್‌ಮಹಲ್ ಹೋಲುವಂತೆ ಉಳ್ಳಾಲದಲ್ಲಿ ಮಸೀದಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಉಳ್ಳಾಲ ಜಮಾತ್‌ನಲ್ಲಿ ಕೋಟೆಪುರದಿಂದ ಮದನಿನಗರ, ಕುಂಪಲ, ಕಲ್ಲಾಪು ಸಹಿತ 28 ಮೊಹಲ್ಲ, 34 ಮಸೀದಿ ಹಾಗೂ 34 ಮದ್ರಸಾಗಳಿವೆ. ಸಾವಿರಾರು ಮನೆಗಳಿವೆ. ಪ್ರತೀ ಮನೆಯಿಂದ ಅವರವರ ಇಚ್ಛಾನುಸಾರ ದೇಣಿಗೆ ಸ್ವೀಕರಿಸಲಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರಾದ
ಹನೀಫ್ ಹಾಜಿ ಹೇಳಿದ್ದಾರೆ.