



ಡೈಲಿ ವಾರ್ತೆ: 24/MAY/2025


CET ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ್ ಜಯಂತಿ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಸರ್ಕಾರ ನಡೆಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ(CET) ಫಲಿತಾಂಶ ಪ್ರಕಟವಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕೆಇಎ ಅಧಿಕೃತ ವೆಬ್ಸೈಟ್ಗಳಾದ cetonline.karnataka.gov.in ಮತ್ತು karresults.nic.in ನಲ್ಲಿ ಫಲಿತಾಂಶ ಲಭ್ಯವಿರಲಿದೆ. ಏಪ್ರಿಲ್ 16, 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.
ಎಂಜಿನಿಯರಿಂಗ್:
ಸಿಇಟಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿ ಚೈತ್ಯನ್ಯ ಸಿಬಿಎಸ್ಇ ಶಾಲೆಯ ಭವೇಶ್ ಜಯಂತಿ ಮೊದಲ ರ್ಯಾಂಕ್ ಗಳಿಸಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ ವಿದ್ಯಾರ್ಥಿ ಸಾತ್ವಿಕ್ ಬಿರಾದರ್ ಎರಡನೇ ರ್ಯಾಂಕ್ ಗಳಿಸಿದ್ದಾರೆ. ದಿನೇಶ್ ಗೋಮತಿ ಶಂಕರ್ ಅರುಣಾಚಲಂ 3ನೇ ರ್ಯಾಂಕ್ ಗಳಿಸಿದ್ದಾರೆ.
ಅಗ್ರಿಕಲ್ಚರ್:
ಅಗ್ರಿಕಲ್ಚರ್ ವಿಭಾಗದಲ್ಲಿ ಅಕ್ಷಯ್ ಎಂ ಪ್ರಥಮ ಸ್ಥಾನ, ಸಾಯಿಶ್ ಶರವಣ ಪಂಡಿತ್ ದ್ವಿತೀಯ ಸ್ಥಾನ ಹಾಗೂ ಸುಚಿತ್.ಪಿ. ಪ್ರಸಾದ್ ಮೂರನೇ ಸ್ಥಾನ ಗಳಿಸಿದ್ದಾರೆ.
ಬಿಎನ್ವೈಎಸ್, ಪಶುವೈದ್ಯಕೀಯ ಮತ್ತು ನರ್ಸಿಂಗ್ ವಿಭಾಗಗಳಲ್ಲಿ ಹರಿಶ್ರಾಜ್ ಡಿವಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಫಲಿತಾಂಶದ ಲಿಂಕ್ ನ್ನು ಮಧ್ಯಾಹ್ನ 2 ಗಂಟೆಗೆ ಸಕ್ರಿಯಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.