ಡೈಲಿ ವಾರ್ತೆ: 25/MAY/2025

ಮಂಗಳೂರು: ಧಾರಾಕಾರ ಮಳೆ ನಡುವೆಯೇ ಚಲಿಸುತ್ತಿದ್ದ ಕಾರು ಬೆಂಕಿಗಾಹುತಿ!

ಮಂಗಳೂರು: ನಗರದ ಕುಲಶೇಖರ ಕಲ್ಪನೆ ಬಳಿ ನಡುರಸ್ತೆಯಲ್ಲಿಯೇ ಕಾರೊಂದು ಧಗಧಗನೇ ಹೊತ್ತಿ ಉರಿದ ಘಟನೆ ಸಂಭವಿಸಿದೆ.

ರವಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ವಿಫ್ಟ್ ಡಿಸಾಯರ್ ಟ್ಯಾಕ್ಸಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಕಾರು ಸಂಪೂರ್ಣ ಧಗಧಗನೇ ಹೊತ್ತಿ ಉರಿದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ ಕಾರಿನಲ್ಲಿ ಬೆಂಕಿಯ ಜ್ವಾಲೆ ಏಳುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ. ಬಳಿಕ ಸ್ಥಳದಲ್ಲಿದ್ದವರೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.

ಈ ಕಾರು ಯಾರಿಗೆ ಸೇರಿದ್ದು, ಯಾಕಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಅದೃಷ್ಟವಶಾತ್ ಯಾವುದೇ ಸಾವು-ನೋವು ಉಂಟಾಗಿಲ್ಲ