ಡೈಲಿ ವಾರ್ತೆ: 27/MAY/2025

ಮಾಣಿ| ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವಾಂತರ, ಸೂರಿಕುಮೇರು ಬಳಿ ಕೃತಕ ಹೊಳೆ : ಚರಂಡಿಗಳಲ್ಲಿ ತುಂಬಿದ್ದ ಮಣ್ಣು ತೆಗೆಯದೇ, ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು

ಮಾಣಿ : ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಕೆ.ಎನ್‌.ಆರ್ ಕಂಪೆನಿಯ ಬೇಜವಾಬ್ದಾರಿತನದ ಕೆಲಸಗಳಿಂದ ಮಾಣಿ ಸೂರಿಕುಮೇರು ಮಧ್ಯೆ ಹಲವಾರು ಅವಾಂತರಗಳು ಸೃಷ್ಠಿಯಾಗಿದೆ, ರಾಜ್ ಕಮಲ್ ಹಾಲ್ ಬಳಿ ಚರಂಡಿಗಳಲ್ಲಿ ತುಂಬಿರುವ ಮಣ್ಣು ತೆಗೆಯದೇ ಇರುವುದರಿಂದ ಮಳೆಯ ನೀರೆಲ್ಲಾ ರಸ್ತೆಯಲ್ಲೇ ತುಂಬಿ ಕೃತಕ ಹೊಳೆ ನಿರ್ಮಾಣವಾಗಿ ವಾಹನ ಸಂಚಾರ ಸುಗಮವಾಗುತ್ತಿಲ್ಲ, ಅದೇ ರೀತಿ ಹಳೀರ ಎಂಬಲ್ಲಿ ಎತ್ತರದಲ್ಲಿ ಇರುವ ಮೂರು ವಿದ್ಯುತ್ ಕಂಬಗಳು ಅವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ಮಾಡಿ ಅದರ ಸುತ್ತಲೂ ಮಣ್ಣು ತುಂಬಿಸದೆ ಹಾಗೇ ಬಿಟ್ಟಿರುವುದರಿಂದ ಅದು ಬೀಳುವ ಅಪಾಯವನ್ನು ಎದುರಿಸುತ್ತಿದೆ.

ಹಳೀರದಿಂದ ಪಟ್ಲಕೋಡಿ ಸಂಪರ್ಕದ ರಸ್ತೆಯ ಪ್ರವೇಶ ರಸ್ತೆಯನ್ನು ಕಳೆದ ಮೂರು ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ರಿಪೇರಿ ಮಾಡಿ ಹೋಗುವುದರಿಂದ ಯಾವುದೇ ವಾಹನಗಳು ಹೋಗದ ಪರಿಸ್ಥಿತಿ ಇದೆ, ರಸ್ತೆಗೆ ಕಾಂಕ್ರೀಟ್ ಅಥವಾ ಡಾಮರು ಹಾಕದೇ ಇರುವುದರಿಂದ ಒಂದೇ ಮಳೆಗೆ ರಸ್ತೆ ಕರಗಿ ಹೋಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯನ್ನು ಆ ಭಾಗದ ಜನರು ಅನುಭವಿಸುತ್ತಿದ್ದು ರೋಗಿಗಳು, ವಯೋವೃದ್ಧರು,ಮಕ್ಕಳು ಪಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬದಿ ವಾಹನ ನಿಲ್ಲಿಸಿ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇಲ್ಲಿನ ಜನತೆಯದ್ದು.

ಹಳೀರ ಎಂಬಲ್ಲಿ ಖತೀಜಮ್ಮ ಎಂಬವರ ಮನೆಗೆ ಅರ್ಧ ತಡೆಗೋಡೆ ಮಾಡಿ ಅನ್ಯಾಯ ಮಾಡಲಾಗಿದೆ ಅವರ ಮನೆ ಬೀಳುವ ಹಂತದಲ್ಲಿದೆ.

ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.