ಡೈಲಿ ವಾರ್ತೆ: 31/MAY/2025

ಯಕ್ಷಗಾನ ಅಕಾಡೆಮಿ ಯಿಂದ ಕಲಾವಿದರಿಗಾಗಿ ಕಲಾಪಗಳು : ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ : ಡಾ.ತಲ್ಲೂರು

ಉಡುಪಿ : ಹಿಂದೆ ಶ್ರದ್ಧಾಭಕ್ತಿಯಿಂದ ಕಲಾವಿದರು ವೃತ್ತಿಪರರಾಗಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದರು. ಇಂದು ಈ ಕ್ಷೇತ್ರಕ್ಕೆ ವೈದ್ಯರು, ಇಂಜೀನಿಯರ್, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಮಂದಿ ಕಲೆಯ ತೇರನ್ನು ಮುಂದೆಳೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಮತ್ತೊಂದೆಡೆ ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟನ್ನು ಮೀರುತ್ತಿದೆ ಎಂಬ ದೂರುಗಳು ಕೂಡಾ ಅಕಾಡೆಮಿಯ ಕದವನ್ನು ತಟ್ಟುತ್ತಿವೆ. ಆದ್ದರಿಂದ ಈ ಸಂಕ್ರಮಣ ಕಾಲದಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯಕ್ಷಗಾನ ಕಲಾವಿದರ ಮೇಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳೀದರು.

ಅವರು ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ಸುವರ್ಣ ಸಡಗರದ ಪ್ರಯುಕ್ತ ಹಮ್ಮಿಕೊಂಡಿರುವ ಯಕ್ಷಗಾನ ಕಲಾವಿದರ ಸಮಾವೇಶಕ್ಕೆ ಪೂರಕವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ‘ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು ‘ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕರಾವಳಿ ಮಾತ್ರವಲ್ಲದೆ ವಿವಿಧ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಯಕ್ಷಗಾನವನ್ನು ಕೊಂಡೊಯ್ಯುವ ಕಾರ್ಯ ಅಕಾಡೆಮಿ ಮಾಡಲಿದೆ. ಕಲಾವಿದರ ಬೇಡಿಕೆಗಳು ಯಕ್ಷಗಾನದ ಚೌಕಟ್ಟಿನ ಒಳಗೆ ಇದ್ದರೆ ಮಾತ್ರ ಅಕಾಡೆಮಿಯಿಂದ ಮಾಡಲು ಸಾಧ್ಯ. ಇದನ್ನು ಕಲಾವಿದರು ಮನಗಾಣಬೇಕು. 60 ವರ್ಷ ಮೇಲ್ಪಟ್ಟವರು, ಅಶಕ್ತರು, ನಿವೃತ್ತಿಯಾದ ಕಲಾವಿದರನ್ನು ಗುರುತಿಸಬೇಕು. ಅವರು ಅರ್ಜಿ ಹಾಕದೆ ಅಕಾಡೆಮಿಯ ಪ್ರಶಸ್ತಿಗಳು ಮುಟ್ಟಬೇಕು ಎನ್ನುವ ಹಂಬಲ ನನ್ನದಾಗಿದೆ. ಇದನ್ನು ಈಗಾಗಲೇ ಜಾರಿ ಮಾಡಿದ್ದೇವೆ. ನನ್ನ ಅವಧಿಯ ಎರಡು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಅರ್ಜಿ ಹಾಕದೇ ಅಕಾಡೆಮಿಯೇ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುವ ಕಾರ್ಯ ಮಾಡಿದೆ. ಕಲಾವಿರ ಶ್ರೇಯೋಭಿವೃದ್ಧಿಯ ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡೇ ನಾನು ಅಕಾಡೆಮಿಯ ಅಧ್ಯಕ್ಷನಾಗಿದ್ದೇನೆ. ಇದರ ಸಾಕಾರಕ್ಕೆ ಕಲಾವಿದರು ಸಹಕಾರ, ಸಲಹೆಗಳನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

ಯಕ್ಷಗಾನ ಕ್ಷೇತ್ರದಲ್ಲಿ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ ಅಭಿನಂದನಾರ್ಹ, ಬಡ ಕಲಾವಿದರಿಗೆ ಮನೆ ಕೂಡಾ ಕಟ್ಟಿಸಿಕೊಡುತ್ತಿದ್ದಾರೆ. ಪ್ರಮುಖವಾಗಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಅಭಿನಂದಿಸಲೇ ಬೇಕು. ನಿಸ್ವಾರ್ಥವಿಲ್ಲದೆ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಇನ್ನಷ್ಟು ಬೆಳೆದು ಯಕ್ಷಗಾನ ಕಲಾವಿದರ ಸೇವೆ ಮಾಡುವಂತಾಗಲಿ ಎಂದು ಡಾ.ತಲ್ಲೂರು ಹಾರೈಸಿದರು.

ಉದ್ಯಮಿ ಗೋಪಾಲ ಸಿ. ಬoಗೇರ ಮಾತನಾಡಿ, ಡಾ.ತಲ್ಲೂರು ಅವರ ನೇತೃತ್ವದಲ್ಲಿ ಯಕ್ಷಗಾನ ಅಕಾಡೆಮಿ ಇತ್ತೀಚಿಗಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಸರಕಾರ ನೀಡುವ ಅನುದಾನವನ್ನು ಮಕ್ಕಳ ಯಕ್ಷಗಾನ, ಯಕ್ಷಗಾನ ತರಬೇತಿ, ವಿಚಾರಸಂಕಿರಣ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗoಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್, ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ಪ್ರೊ. ಸದಾಶಿವ ರಾವ್, ನಾರಾಯಣ ಎಂ.ಹೆಗಡೆ ಮತ್ತು ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ಸದಸ್ಯರಾದ ಸತೀಶ್ ಅಡಪ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕೇರಳ ತ್ರಿಶೂರ್ ನ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ವತಿಯಿಂದ ‘ಸೀತಾಪಹರಣಂ -ಜಟಾಯುವಧಂ’ ಕೂಡಿಯಾಟ್ಟಂ ಪ್ರದರ್ಶನ ಜನಮನಸೂರೆಗೊಂಡಿತು.

ನಂತರ ‘ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೇ ? ಉಪವೃತ್ತಿಯಾಗಿರಬೇಕೇ ? ಎಂಬ ವಿಷಯದಲ್ಲಿ ಮುಕ್ತ ಚರ್ಚೆ ನಡೆಯಿತು. ಆರಂಭದಲ್ಲಿ ಮಣಿಪಾಲದ ಕೆಎಂಸಿ ವತಿಯಿಂದ ಕಲಾವಿದರಿಗಾಗಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು.