ಡೈಲಿ ವಾರ್ತೆ: 31/MAY/2025

ಕರ್ತವ್ಯ ಲೋಪ ಆರೋಪ|ಕುಂದಾಪುರ ಕಂದಾಯ ನಿರೀಕ್ಷಕರ ವಿರುದ್ಧ ಲೋಕಾಯುಕ್ತರಿಗೆ ದೂರು!

ಕುಂದಾಪುರ: ತಾಲೂಕಿನ ಕುಂದಾಪುರ ಕಸಬಾ ಗ್ರಾಮದ ಸರ್ವೇ ನಂಬ್ರ 85/6ಎ ರಲ್ಲಿ 0.04 ಎಕ್ರೆ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿ ಭೂಕಬಳಿಕೆ ಮಾಡಿರುವುದನ್ನು ತೆರವುಗೊಳಿಸಲು ತಹಶೀಲ್ದಾರರು 2 ಬಾರಿ ಮೆಮೋ ನೋಟೀಸು ನೀಡಿದರೂ ಕಂದಾಯ‌ ನಿರೀಕ್ಷಕರು‌ ಯಾವುದೇ ಕ್ರಮ‌ತೆಗೆದುಕೊಳ್ಳದಿರುವ ಬಗ್ಗೆ ಲೋಕಾಯುಕ್ತರಿಗೆ ಸತೀಶ ಖಾರ್ವಿ ಅವರು ದೂರು ನೀಡಿದ್ದಾರೆ.

ಕುಂದಾಪುರ ಕಂದಾಯ ನಿರೀಕ್ಷಕರು ದಿನೇಶ ಉದ್ಧಾರ್ ‘ಭೂ ಒತ್ತುವರಿ ಮಾಡಿರುವ ಜೊತೆಯಲ್ಲಿ ಶಾಮಿಲಾಗಿ ಕರ್ತವ್ಯ ಲೋಪವೆಸಗಿದ್ದು, ಸರಕಾರದ ಭೂಮಿಯನ್ನು ಕಬಳಿಸಲು ಸಹಾಯ ಮಾಡುತ್ತಿದ್ದು ಅಕ್ರಮ ಅನಧೀಕೃತ ಕಟ್ಟಡವನ್ನು ಊರ್ಜಿತವಾಗಿ ಇಡುವ ಬಗ್ಗೆ ವರದಿ ನೀಡಿರುತ್ತಾರೆ. ಅವರನ್ನು ತಕ್ಷಣದಿಂದ ಅಮಾನತು ಗೊಳಿಸಬೇಕು ಎಂದು‌ ದೂರಿನಲ್ಲಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಸರ್ವೇನಂಬ್ರ 85/6ಎ ರಲ್ಲಿ 0.04ಎಕ್ರೆ ಜಮೀನುಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಬಾವಿಯಿದ್ದು, ಈ ಬಾವಿಯ ನೀರನ್ನು ತೆಗೆದುಕೊಂಡು ಹೋಗಿ ಬರಲು ಜಾಗವನ್ನು ಒತ್ತುವರಿ ಮಾಡಿರುತ್ತಾರೆ. ಖಾಸಗಿ ವ್ಯಕ್ತಿ ಅಕ್ರಮವಾಗಿ ಒತ್ತುವರಿ ಮಾಡಿ ಭೂಕಬಳಿಕೆ ಮಾಡುತ್ತಿರುವ ಬಗ್ಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ, ಜಿಲ್ಲಾಧಿಕಾರಿಗಳು, ಸರಕಾರದ ಪ್ರಧಾನ ಕಾರ್ಯದರ್ಶಿ, ಕುಂದಾಪುರ ಉಪವಿಭಾಗಾಧಿಕಾರಿ ಯವರಿಗೂ ದೂರು ನೀಡಿದ್ದು. ಈ ಬಗ್ಗೆ ದಂಡಾಧಿಕಾರಿಯವರು 2 ಬಾರಿ ತೆರವುಗೊಳಿಸಲು ಮೆಮೋ ನೋಟಿಸು ನೀಡಿದ್ದರು.‌ಆದರೂ ಕೂಡಾ ಕುಂದಾಪುರ ಪುರಸಭೆ ಸದಸ್ಯರ ಕುಮ್ಮಕ್ಕಿನಿಂದ ಕಂದಾಯ ನಿರೀಕ್ಷಕರು ಕಟ್ಟಡ ಕಟ್ಟವವರಿಗೆ ಸಹಾಯ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ವರದಿಯನ್ನು ತಿರುಚಿ ಸುಳ್ಳು ವರದಿ ನೀಡಿದ್ದಾರೆ ಎಂದು ಅವರು ದೂರಿದ್ದಾರೆ.