ಡೈಲಿ ವಾರ್ತೆ: 10/JUNE/2025

ಮಕ್ಕಳ ಮೇಳದ ಹಂದೆ- ಉಡುಪ ಯುಗ ಪ್ರವರ್ತಕರು
ಬೆಂಗಳೂರಿನ ‘ಪರಂಪರಾ’ ದಲ್ಲಿ ಸುವರ್ಣ ಪರ್ವ ಸರಣಿ

ಕೋಟ: ಸಂಘಟನೆ ಮತ್ತು ನಿರಂತರತೆ ಎರಡೂ ಸುಲಭದ್ದಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಸುಮಾರು ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯವನ್ನು ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಯಕ್ಷ ಯುಗ ಪ್ರವರ್ತಕರು. ಅನೇಕ ಮಕ್ಕಳ ಮೇಳಗಳು ಇವತ್ತು ಹುಟ್ಟಿ, ಪ್ರದರ್ಶನಗೊಳ್ಳುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಶಸ್ಸಿನ ಗಾಥೆಯೇ ಮೂಲ ಪ್ರೇರಣೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿ, ಯಕ್ಷಗಾನ ಪ್ರೇಕ್ಷಕರ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆಯನ್ನು ಮೆರೆದಿದೆ” ಎಂದು ಯಕ್ಷಗಾನ ಸಂಶೋಧಕ, ವಿದ್ವಾಂಸ ಆನಂದರಾಮ ಉಪಾಧ್ಯ ಹೇಳಿದರು.

ಕರ್ನಾಟಕ ಯಕ್ಷಧಾಮ ಮಂಗಳೂರು, ಪದ್ಮ ಕಮಲ ಟ್ರಸ್ಟ್ ಬೆಂಗಳೂರು, ಕಲ್ಕೂರ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ಆಯೋಜಿಸಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸಂಮಾನ- ಯಕ್ಷಗಾನ ಪ್ರದರ್ಶನದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.

ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್. ಜನಾರ್ದನ ಹಂದೆ ಅಧ್ಯಕ್ಷತೆವಹಿಸಿದ್ದರು. ಪ್ರಾಕ್ತನ ಕಲಾವಿದರಾದ ಗಣೇಶ್ ಶಾನುಭಾಗ್, ರಾಮದೇವ ಉರಾಳ, ವೆಂಕಟೇಶ ಹಂದೆ, ಕ್ರಷ್ಣಾನಂದ ಆಚಾರ್, ಮುರಳಿಧರ ನಾವುಡ, ವಿಶ್ವನಾಥ ಉರಾಳ, ಕಲಾ ಪೋಷಕರಾದ ಎಂ. ಸುಧೀಂದ್ರ ಹೊಳ್ಳ, ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿದ್ದು ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರು, ಸಂಘಟಕರು, ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ಮೋಹನ್, ಶ್ರೀನಿವಾಸ ಸಾಸ್ತಾನ್, ಕೃಷ್ಣಮೂರ್ತಿ ತುಂಗ, ಡಾ. ಬೇಗಾರು ಶಿವ ಕುಮಾರ್, ಡಾ. ರಾಧಾಕೃಷ್ಣ ಉರಾಳ, ಶಂಕರ ಬಾಳ್ಕುದ್ರು ಅವರನ್ನು ಸುವರ್ಣ ಸಂಮಾನದೊಂದಿಗೆ ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರದೀಪ ಮಧ್ಯಸ್ಥ ವಂದಿಸಿದರು. ಮಾಧುರಿ ಶ್ರೀರಾಮ ನಿರೂಪಿಸಿದರು.
ಬಳಿಕ ಕಾರ್ಕಳ ಶ್ರೀದೇವಿ ಲಲಿತ ಕಲಾ ಬಳಗದವರಿಂದ ಶಶಿಕಾಂತ ಶೆಟ್ಟಿ ನಿರ್ದೇಶನದಲ್ಲಿ ಶಾಂಭವಿ ವಿಜಯ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಸಂಪನ್ನಗೊಂಡಿತು.