ಡೈಲಿ ವಾರ್ತೆ: 14/JUNE/2025

ಕಲ್ಲಡ್ಕ : ನವೀಕೃತ ಮದ್ರಸ ಕಟ್ಟಡ ಹಾಗೂ ಅಲ್-ಬಿರ್ರ್ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ

ಬಂಟ್ವಾಳ : ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಧೀನದ ನವೀಕೃತ ಮದ್ರಸ ಕಟ್ಟಡ ಹಾಗೂ ಅಲ್-ಬಿರ್ರ್ ಆಂಗ್ಲ ಮಾಧ್ಯಮ ಶಾಲೆಯ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇರಳ- ಕ್ಯಾಲಿಕೆಟ್ ನ ಅಲ್ ಬಿರ್ರ್ ಸ್ಕೂಲ್ಸ್ ನ ಆಡಳಿತ ನಿರ್ದೇಶಕ ಕೆ.ಪಿ.ಮುಹಮ್ಮದ್ ಮಾತನಾಡಿ, ಅಲ್ ಬಿರ್ರ್ ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ಶೈಕ್ಷಣಿಕ ಪದ್ಧತಿಯನ್ನು ಅಳವಡಿಸಿ ಕೆಲವೇ ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ 452 ಶಾಲೆಗಳು ಕಾರ್ಯಾಚರಿಸುತ್ತಿದೆ.
ಅಲ್ ಬಿರ್ರ್ ಸಂಸ್ಥೆಯು ಕಾಲದ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿ ಉತ್ತಮ ಪ್ರಜೆಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ ಎಂದರು.

ಅಲ್ ಬಿರ್ರ್ ಸ್ಕೂಲ್ಸ್ ನ ದ.ಕ.ಜಿಲ್ಲಾ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ ಶಾಲೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೋಡಿ ಅಧ್ಯಕ್ಷತೆ ವಹಿಸಿದ್ದರು.

ಕಲ್ಲಡ್ಕ ಎಂ.ಜೆ.ಎಂ. ಮುದರ್ರಿಸ್ ಉಸ್ಮಾನ್ ದಾರಿಮಿ, ಮಾಜಿ ಮುದರ್ರಿಸ್ ಶೇಖ್ ಮುಹಮ್ಮದ್ ಇರ್ಫಾನಿ, ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಜಿ.ಮುಹಮ್ಮದ್ ಹನೀಫ್, ಕಲ್ಲಡ್ಕ - ಕೆ.ಸಿ.ರೋಡ್ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಶೇಖಬ್ಬ, ಅಲ್ ಬಿರ್ರ್ ಶಾಲಾ ಪೋಷಕರ ತರಬೇತುದಾರ ಸಯ್ಯಿದ್ ಅಫ್ಹಾಮ್ (ಕರಾವಳಿ) ತಂಙಳ್ ಪಾತೂರು, ಗೋಳ್ತಮಜಲು ಖತೀಬ್ ಮುನವ್ವರ್ ಬಾಖವಿ, ಕೆ.ಸಿ.ರೋಡ್ ಖತೀಬ್ ಯಹ್ಯಾ ದಾರಿಮಿ, ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ದಾರಿಮಿ, ಕಲ್ಲಡ್ಕ ಎಂ.ಜೆ.ಎಂ.ಕೋಶಾಧಿಕಾರಿ ಜೆ.ಕೆ.ಜವಾದ್, ಕಲ್ಲಡ್ಕ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಿರಾಜುಲ್ ಮುನೀರ್ ಅಝ್ ಅರಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಮದ್ರಸ ಕಟ್ಟಡ ನಿರ್ಮಾಣದ ಇಂಜಿನಿಯರ್ ಗಳಾದ ಮುಹಮ್ಮದ್ ಯಾಸೀರ್ ಹಾಗೂ ಇಬ್ರಾಹಿಂ ಖಲೀಲ್ ಅವರನ್ನು ಸನ್ಮಾನಿಸಲಾಯಿತು. ಜಮಾಅತ್ ವ್ಯಾಪ್ತಿಯಲ್ಲಿ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

  ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪನಾಮ ಸ್ವಾಗತಿಸಿ, ವಂದಿಸಿದರು. ಹಮೀದ್ ಅಲಿ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.