



ಡೈಲಿ ವಾರ್ತೆ: 21/JUNE/2025


ಸುಜ್ಞಾನ್ ಎಜುಕೇಶನಲ್ ಟ್ರಸ್ಟ್(ರಿ.) ಸುಜ್ಞಾನ ಪದವಿಪೂರ್ವ ಕಾಲೇಜು, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ
“ಸರ್ವ ರೋಗಕ್ಕೂ ಯೋಗ ಮದ್ದು”- ಡಾ.ರಮೇಶ್ ಶೆಟ್ಟಿ

ಕುಂದಾಪುರ:ಕೋಟೇಶ್ವರ ಯಡಾಡಿ-ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.

ಯೋಗ ದಿನಾಚರಣೆಗೆ ಚಾಲನೆ ನೀಡಿದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಮಾತನಾಡುತ್ತಾ”ಜಾಗತಿಕ ಲೋಕಕ್ಕೆ ಯೋಗ ಭಾರತದ ಬಹುದೊಡ್ಡ ಕೊಡುಗೆಯಾಗಿದ್ದು ಹಲವು ರೋಗಗಳಿಗೂ ಉತ್ತಮವಾದ ಔಷಧವಾಗಿ ಪರಿಣಮಿಸಿದೆ. ಪ್ರಾಚೀನ ಕಾಲದಲ್ಲಿಯೇ ಋಷಿ ಮುನಿಗಳಿಂದ ಪರಿಚಿತವಾದ ಯೋಗ ಕಲೆಯು ಇಂದು ನಮ್ಮ ಭಾರತದ ಭವ್ಯ ಸಂಸ್ಕೃತಿಯ ಒಂದು ಅಂಗವಾಗಿದೆ.ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವು ಉತ್ತಮ ಸಾಧನವಾಗಿದ್ದು ಪ್ರತಿನಿತ್ಯ ಯೋಗ ಮಾಡುವುದರಿಂದ ಆರೋಗ್ಯವಂತರಾಗಿ ಉತ್ತಮ ವ್ಯಕ್ತಿತ್ವ ಹೊಂದಬಹುದು.

ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಯೋಗ ಅಭ್ಯಾಸ ಮಾಡುವುದರಿಂದ ಕಲಿಕೆಯಲ್ಲಿ ಏಕಾಗ್ರತೆಯನ್ನು ಕಂಡುಕೊಂಡು ಸರ್ವಾಂಗೀಣ ಪ್ರಗತಿಗೆ ಸಹಾಯವಾಗುತ್ತದೆ. ಇಂದು ಆಧುನಿಕ ವೈದ್ಯಕೀಯ ಪದ್ದತಿಯು ಗುಣಪಡಿಸಲಾಗದ ಹಲವಾರು ರೋಗಗಳಿಗೆ ಯೋಗವು ರಾಮಬಾಣವಾಗಿರುವುದರಿಂದ ವಿಶ್ವ ಮಾನ್ಯತೆಯನ್ನು ಪಡೆದಿದೆ”ಎಂದರು.

ಸಂಸ್ಥೆಯ ದೈಹಿಕ ಶಿಕ್ಷಕರಾದ ಸತೀಶ್ ಕುಮಾರ್ ಮತ್ತು ಸೂರ್ಯ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಯೋಗದ ವಿವಿಧ ಆಸನಗಳನ್ನು ಬಹಳ ಉತ್ಸುಕತೆಯಿಂದ ಪ್ರದರ್ಶಿಸಿದರು.
ಸಂಸ್ಥೆಯ ಸಂಸ್ಕೃತ ಶಿಕ್ಷಕ ರಜತ್ ಭಟ್ ಮಕ್ಕಳಿಗೆ ಯೋಗ ಶಿಕ್ಷಣದ ಮಹತ್ವ ಮತ್ತು ಪ್ರಾಮುಖ್ಯತೆ ಕುರಿತು ಬಹು ವಿಸ್ತಾರವಾಗಿ ವಿವರಿಸಿದರು.