ಡೈಲಿ ವಾರ್ತೆ: 22/JUNE/2025

“ಸೂಳೆಯಾ ಮಗನುಟ್ಟಿ, ಆಳುವನು ಮುನಿಪುರವ”:
ದೇಶಕ್ಕೆ ಗಂಡಾಂತರ, ಊಹಿಸಲಾಗದ ದುಃಖ: ಕೋಡಿಮಠದ ಶ್ರೀ ಭವಿಷ್ಯ!
ರಾಜ್ಯದಲ್ಲಿ ಸಿದ್ದರಾಮಯ್ಯಗೆ ಯಾವುದೇ ತೊಂದರೆ ಇಲ್ಲ

ಹಾಸನ: ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವವಾಗುವ ಲಕ್ಷಣಗಳಿವೆ, ನಿರೀಕ್ಷೆಗೂ ಮೀರಿದ ದುಃಖ ಭಾರತಕ್ಕೆ ಬರಲಿದೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶ್ರೀಮಠದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿ,
ನಿರೀಕ್ಷೆಗೂ ಮೀರಿದ ದುಃಖ ದೇಶವನ್ನು ಬಾಧಿಸಲಿದೆ. ಮೇಘ ಸ್ಫೋಟ, ಯುದ್ಧ, ಅರಸನಾಲಯಕ್ಕೆ ಕಾರ್ಮೋಡ ಕವಿಯಲಿದೆ. ಇದು ರಾಜ್ಯಕ್ಕೂ, ದೇಶಕ್ಕೂ ಅನ್ವಯಿಸಲಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯರಿಗೆ ಏನೂ ತೊಂದರೆ ಇಲ್ಲ. ಯುದ್ಧ ನಿಲ್ಲುವುದು ಸಂವತ್ಸರ ಪರ್ವದಲ್ಲಿ ಕಷ್ಟ. ದ್ವೇಷ, ಅಸೂಯೆಗೆ ಒಂದಿಬ್ಬರು ಬಲಿಯಾಗುತ್ತಾರೆ. ಊಹಿಸಲಾರದ ದುಃಖ ಈ ಭಾರತಕ್ಕೂ ಬರುತ್ತದೆ ಎಂದರು.

ಸಂಕ್ರಾಂತಿ ಒಳಗೆ ಮೇಘ ಸ್ಫೋಟವಾಗುವ ಸಾಧ್ಯತೆ ಇದೆ ಹಾಗೂ ಜನಜೀವನ ಅಸ್ಥಿರವಾಗುತ್ತದೆ. ಮನೆಯಿಂದ ಹೊರ ಹೋದವರು ಯಾವಾಗ ವಾಪಸ್ ಬರುತ್ತಾರೆ ಎಂದು ಹೇಳುವುದು ಕಷ್ಟ. ಜನವರಿ ಒಳಗೆ ಒಂದು ದೊಡ್ಡ ಗಂಡಾಂತರವೂ ದೇಶಕ್ಕೆ ಇದೆ. ಸೂಳೆಯ ಮಗನುಟ್ಟಿ, ಆಳುವನು ಮುನಿಪುರವ, ಯುದ್ಧವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ನುಡಿದ ಶ್ರೀಗಳು, ಇದರರ್ಥವನ್ನು ಮುಂದೆ ಹೇಳುತ್ತೇನೆ. ಕೊರೊನಾ ಇನ್ನೊಂದು ರೂಪ ತಾಳಲಿದೆ ಕೆಲವು ದೇಶಗಳು ಮುಳುಗಲಿವೆ, ಕೆಲವು ದೇಶಗಳು ಏಳಲಿವೆ. ವಾಯು ಪ್ರಳಯ, ಭೂ ಪ್ರಳಯವಾಗುತ್ತದೆ ಎಂದು ಕೋಡಿಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.