



ಡೈಲಿ ವಾರ್ತೆ: 24/JUNE/2025


ಬಂಟ್ವಾಳ : ಚಿಣ್ಣರಲೋಕ ಸೇವಾ ಬಂಧು ಹಾಗೂ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ

ಬಂಟ್ವಾಳ : ಚಿಣ್ಣರಲೋಕ ಸೇವಾ ಬಂಧು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ, ಸಮಾಜದಲ್ಲಿ ದುರ್ಬಲರಿಗೆ ನೆರವು ನೀಡಲು ಮನಸ್ಸು ಅತಿ ಮುಖ್ಯವಾಗಿದ್ದು, ಅಂತಹ ಮನಸ್ಸು ಚಿಣ್ಣರಲೋಕ ಸಂಸ್ಥೆಯಲ್ಲಿದೆ. ಸಂಸ್ಥೆಯು ಮಕ್ಕಳನ್ನು ವೇದಿಕೆಗೆ ತಂದು ಧೈರ್ಯ ತುಂಬಿ ಅವರ ಸಾಮರ್ಥ್ಯ ಹೊರ ತೆಗೆದು ವ್ಯಕ್ತಿತ್ವ ವಿಕಸನದ ಕಾರ್ಯ ಮಾಡುತ್ತಿದೆ ಎಂದರು.
ಉದ್ಯಮಿ ಬಿ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಿಣ್ಣರಲೋಕ ಸಹಕಾರಿ ಸಂಘದ ಅಧ್ಯಕ್ಷ ಬಾಲಾಜಿಬೈಲು ಚಂದ್ರಹಾಸ ರೈ, ಚಿಣ್ಣರಲೋಕ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪಿ.ಜಯರಾಮ ರೈ ವಿಟ್ಲ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು, ಗೌರವ ಸಲಹೆಗಾರ ಸರಪಾಡಿ ಅಶೋಕ ಶೆಟ್ಟಿ, ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿಗಳಾದ ರಾಜೇಶ್ ಮೆಂಡನ್, ಗಣೇಶ್ ಕೊಲ್ಯ, ಮಂಜುನಾಥ್, ಬಲವಂಡಿ ಕ್ಷೇತ್ರದ ಗಡಿಪ್ರದಾನರಾದ ದುರ್ಗಾದಾಸ್ ಶೆಟ್ಟಿ ಮಾವಂತೂರು, ಬೋಳಂತೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ, ಮುಖ್ಯ ಶಿಕ್ಷಕಿ ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ದತ್ತು ಸಮಿತಿ ಸಂಚಾಲಕ ರಾಮಕೃಷ್ಣ ರಾವ್, ಮೋಕೆದ ಕಲಾವಿದೆರ್ ಸಂಚಾಲಕ ವಿಜಯಕುಮಾರ್ ಕೊಟ್ಟಾರಿ ಅಡ್ಯಾರು, ಸಂಸ್ಥಾಪಕ ಮೋಹನದಾಸ ಕೊಟ್ಟಾರಿ ಮುನ್ನೂರು, ಉಪಾಧ್ಯಕ್ಷ ಇಬ್ರಾಹಿಂ ಕೈಲಾರ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಾದ ಪ್ರಾರ್ಥನಾ, ಅಝ್ಕಾ ಖತೀಜ ಕುನ್ನಿಲ್, ತನ್ವಿ ಹಾಗೂ ಶ್ರೀಶೈಲ ಅವರನ್ನು ಪುರಸ್ಕರಿಸಲಾಯಿತು. ಆಡಳಿತ ಟ್ರಸ್ಟಿ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.