



ಡೈಲಿ ವಾರ್ತೆ: 03/ಜುಲೈ/2025


ಬೆಂಗಳೂರಿನಲ್ಲಿ ಎಕ್ಸ್ಟ್ರಾ ಕಾಫಿ ಕಪ್ಗಾಗಿ ಗಲಾಟೆ: ಹೋಟೆಲ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ಎಕ್ಸ್ಟ್ರಾ ಕಾಫಿ ಕಪ್ ಕೊಡದಿದ್ದಕ್ಕೆ ಹೋಟೆಲ್ ಸಿಬ್ಬಂದಿಗೆ ನಾಲ್ಕೈದು ಜನ ಸೇರಿಕೊಂಡು ಹಿಗ್ಗಾಮುಗ್ಗಾ ಹಲ್ಲೆ ನಡೆಸದ್ದಾರೆ. ಈ ಘಟನೆ ಬುಧವಾರ ಬೆಂಗಳೂರಿನ ಶೇಷಾದ್ರಿಪುರಂನ ನಮ್ಮ ಫಿಲ್ಟರ್ ಕಾಫಿ ಶಾಪ್ನಲ್ಲಿ ನಡೆದಿದೆ.
ಕಾಫಿ ಶಾಪ್ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಎಕ್ಸ್ಟ್ರಾ ಕಪ್ ಕೇಳಿದ್ದಾರೆ. ಈ ವೇಳೆ, ಹೋಟೆಲ್ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ನಾಲ್ವರು, ಹೋಟೆಲ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಮನಬಂದಂತೆ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ಈ ಪ್ರಕರಣದ ಸಂಬಂಧ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಪ್ರತಿಕ್ರಿಯಿಸಿದ್ದು, ಶೇಷಾದ್ರಿಪುರಂ ನಲ್ಲಿ ನಮ್ಮ ಫಿಲ್ಟರ್ ಕಾಫಿ ಶಾಪ್ ನಲ್ಲಿ ಗಲಾಟೆ ಆಗಿದೆ. ನಿನ್ನೆ (ಜುಲೈ 02) ಸಂಜೆ 6:30 ಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಂಬಂಧ ಶೇಷಾದ್ರಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ. ಎಕ್ಸ್ ಟ್ರಾ ಕಪ್ ಕೆಳಿದ್ದಾರೆ. ಅದು ಕೊಡುವ ರೂಲ್ಸ್ ಇಲ್ಲ. ಈ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಸ್ಟಮರ್ ನಡುವೆ ಗಲಾಟೆ ಆಗಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನ ಬಂಧಿಸಿ ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.