



ಡೈಲಿ ವಾರ್ತೆ: 03/ಜುಲೈ/2025


ಏಮಾಜೆ : ದ.ಕ. ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ “ಜ್ಞಾನವಾಹಿನಿ -2025_” ವಿನೂತನ ಯೋಜನೆ ಆರಂಭ

ಬಂಟ್ವಾಳ : ಒಬ್ಬರ ವಿದ್ಯಾದಾನ ನೂರಾರು ಮಕ್ಕಳ ಜ್ಞಾನ ವರ್ಧನೆಯ ಮೊದಲ ಹೆಜ್ಜೆಯಾಗಬಹುದು ಎಂಬ ಆಶಯದೊಂದಿಗೆ ನೆಟ್ಲಮುಡ್ನೂರು ಗ್ರಾಮದ ದ.ಕ. ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ
“ಜ್ಞಾನವಾಹಿನಿ -2025” ಎಂಬ ವಿನೂತನ ಯೋಜನೆಯನ್ನು ಗುರುವಾರ ಆರಂಭಿಸಲಾಯಿತು.
ಯೋಜನೆಯನ್ನು ಉದ್ಘಾಟಿಸಿದ ಮಂಗಳೂರು ಎ.ಜೆ ಸಂಶೋಧನಾ ಕೇಂದ್ರದ ಗ್ಯಾಸ್ಟ್ರೋ ಸರ್ಜನ್ ಡಾ. ಅಶ್ವಿನ್ ಆಳ್ವ ಮಾತನಾಡಿ, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗುವ ಇಂತಹ ಯೋಜನೆಗಳು ಮೂಡಿ ಬರುತ್ತಿರುವುದು ಶ್ಲಾಘನೀಯ ಎಂದರು.
ಸರಕಾರಿ ಶಾಲೆಯನ್ನು ಉಳಿಸುವ ದೃಷ್ಟಿಯಲ್ಲಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್.ಕೆ.ಜಿ ಹಾಗೂ ಯು ಕೆ ಜಿ) ಪ್ರಾರಂಭಿಸಿ
ಆ ತರಗತಿ ಶಿಕ್ಷಕರಿಗೆ ವೇತನ ಹಾಗೂ ಇನ್ನಿತರ ಖರ್ಚು ವೆಚ್ಚಗಳನ್ನು ಭರಿಸುವ ಉದ್ದೇಶದಿಂದ ವಾರ್ಷಿಕ ತಲಾ 1000/- ದಂತೆ 100ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿ ಆ ಮೂಲಕ ಖರ್ಚು ವೆಚ್ಚಗಳನ್ನು ಬರಿಸುವ ಉದ್ದೇಶಕ್ಕಾಗಿ ರೂಪಗೊಂಡ ಯೋಜನೆ ಇದಾಗಿದ್ದು,
ಈ ಯೋಜನೆಗೆ ಈಗಾಗಲೇ ಹಲವಾರು ಸಹೃದಯಿ
ವಿದ್ಯಾಭಿಮಾನಿಗಳು ಒಮ್ಮತದ ಸಹಕಾರವನ್ನು ನೀಡುತ್ತಿದ್ದು, ಈ ಯೋಜನೆಗೆ ದೇಶ ವಿದೇಶಗಳಲ್ಲಿರುವ ನಮ್ಮೂರ ವಿದ್ಯಾಭಿಮಾನಿಗಳ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ರಮೇಶ್ ಮಾತನಾಡಿ, ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಈ ಬಗ್ಗೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದು ಈಗಾಗಲೇ ಸದಸ್ಯರ ಸಂಖ್ಯೆ ನೂರರ ಗಡಿ ದಾಟಿದ್ದು, ಸರಕಾರಿ ಶಾಲೆ ಉಳಿಸುವ ದೃಷ್ಟಿಯಿಂದ ಆರಂಭಿಸಿದ ಈ ಯೋಜನೆ ಸಾರ್ಥಕ ಅನಿಸುತ್ತದೆ ಎಂದು ಹೇಳಿದರು .
ಈ ಸಂದರ್ಭ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಹರೀಶ್ ಕುಲಾಲ್, ನಿಕಟ ಪೂರ್ವ ಉಪಾಧ್ಯಕ್ಷ ಪ್ರಸಾದ್ ಆಚಾರ್ಯ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಮಿತ, ಪಂಚಾಯತ್ ಸದಸ್ಯರುಗಳಾದ ಧನಂಜಯ ಗೌಡ, ಶಕೀಲಾ ಕೆ. ಪೂಜಾರಿ, ಶಾಲಾ ವಿದ್ಯಾರ್ಥಿ ನಾಯಕಿ ರಿದಿಕಾ ಶೆಟ್ಟಿ, ಉಪ ನಾಯಕಿ ವರ್ಷ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿ ಪೋಷಕರು, ಊರ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕ ಉದಯ ಚಂದ್ರ ಸ್ವಾಗತಿಸಿ, ಶಿಕ್ಷಕಿ ಅಕ್ಷತಾ ವಂದಿಸಿದರು. ಶಿಕ್ಷಕಿಯರಾದ ದೀಕ್ಷ ಹಾಗೂ ಐಸಮ್ಮ ಕಾರ್ಯಕ್ರಮ ನಿರೂಪಿಸಿದರು.