


ಡೈಲಿ ವಾರ್ತೆ: 09/ಜುಲೈ/2025


ಎಂಸಿಎ ಪದವೀಧರೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

ಮಂಡ್ಯ: ಯುವತಿಯೋರ್ವಳು ಕಾವೇರಿ ನದಿಗೆ ಬಿದ್ದು ಆತ್ಮಹತ್ಯೆಗೆ ಮುಂದಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಜರುಗಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಅವರ ಪುತ್ರಿ ಸಿಂಚನಾ (24) ಕಾವೇರಿ ನದಿಗೆ ಹಾರಿರುವ ಯುವತಿ.
ಯುವತಿ ಸಿಂಚನಾ ಎಂಸಿಎ ಪದವೀಧರೆಯಾಗಿದ್ದು ಕೆಲ ವರ್ಷಗಳಿಂದೀಚೆಗೆ ಪಿಸಿಓಡಿ (PCOD) ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಾಗಾಗಿದ್ದರು ಎನ್ನಲಾಗಿದೆ.
ಮಂಗಳವಾರ ಸಂಜೆ ವೇಳೆಗೆ ಏಕಾಏಕಿ ಮನೆಯಿಂದ ಹೊರಟು ಹಾಸನ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ಬಸ್ಸಿನಲ್ಲಿ ಆಗಮಿಸಿದ್ದಾರೆ. ನಂತರ ಬಸ್ ನಿಲ್ದಾಣದಿಂದ ಬೆಂಗಳೂರು ದಿಕ್ಕಿಗೆ ನಡೆದು ಹೋದ ಈಕೆ ಉತ್ತರ ಕಾವೇರಿಯ ಸೇತುವೆ ಮೇಲಿಂದ ರಾತ್ರಿ 8ರ ಸಮಯದಲ್ಲಿ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಸ್ಥಳಿಯ ದಾರಿಹೋಕ ವಾಹನ ಸವಾರರು ತಕ್ಷಣ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಹಾರೆ. ಘಟನಾ ಸ್ಥಳ ಸೇರಿದಂತೆ ನದಿ ತೀರದ 1 ಕಿಮಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊಬೈಲ್ ಬೆಳಕಿನಲ್ಲೇ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಸಿಕ್ಕ ಬ್ಯಾಗ್, ಆಧಾರ್ ಕಾಡ್೯ ಹಾಗೂ ಚಪ್ಪಲಿಗಳ ಆಧಾರದ ಮೇಲೆ ಈಕೆಯೇ ನದಿಗೆ ಹಾರಿದ್ದಾಳೆ ಎಂದು ಶಂಖೆ ವ್ಯಕ್ತಪಡಿಸಿ ಇದೀಗ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ.