


ಡೈಲಿ ವಾರ್ತೆ: 16/ಜುಲೈ/2025


ಗಂಗೊಳ್ಳಿ ದೋಣಿ ದುರಂತ: ನಾಪತ್ತೆಯಾಗಿದ್ದ ಮೀನುಗಾರ ರೋಹಿತ್ ಖಾರ್ವಿ ಮೃತದೇಹ ಕೋಡಿಯಲ್ಲಿ ಪತ್ತೆ

ಕುಂದಾಪುರ: ಗಂಗೊಳ್ಳಿ ಬಂದರಿನಿಂದ ಜು. 15 ರಂದು ಬೆಳಿಗ್ಗೆ ಮೀನುಗಾರಿಕೆಗೆ ಸಿಪಾಯಿ ಸುರೇಶ ಮಾಲೀಕತ್ವದ ದೋಣಿಯಲ್ಲಿ ನಾಲ್ಕು ಜನರು ತೆರಳಿದ್ದರು.
ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ದೋಣಿ ಮಗುಚಿದ್ದು, ಒಬ್ಬ ಮೀನುಗಾರ ಈಜಿ ದಡ ಸೇರಿದ್ದರು, ಮೂವರು ಮೀನುಗಾರರು ನಾಪತ್ತೆಯಾಗಿದ್ದರು.
ನಿರಂತರ ಶೋಧ ಕಾರ್ಯದಲ್ಲಿ ರೋಹಿತ್ ಖಾರ್ವಿ (38) ಎನ್ನುವವರ ಮೃತದೇಹ ಕೋಡಿ ಲೈಟ್ ಹೌಸ್ ಸಮುದ್ರ ತೀರದಲ್ಲಿ ಇಂದು ಬುಧವಾರ ಬೆಳಗಿನ ಜಾವ 4ಗಂಟೆಗೆ ಪತ್ತೆಯಾಗಿದೆ. ಇನ್ನಿಬ್ಬರಾದ ಜಗದೀಶ್, ಸುರೇಶ್ ಖಾರ್ವಿ ಮೃತದೇಹ ಪತ್ತೆಯಾಗಬೇಕಿದೆ.
ಮಂಗಳವಾರ ಘಟನಾ ಸ್ಥಳಕ್ಕೆ ಆಗಮಿಸಿದ್ದ ಸಂಸದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ, ಇಂತಹ ಘಟನೆ ನಡೆದಿರುವುದು ವಿಷಾದನೀಯ. ಈಗಾಗಲೇ ಶಾಸಕರು, ಉಡುಪಿ ಸಂಸದರು ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ನಾನು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದೇನೆ. ಮೃತದೇಹ ಪತ್ತೆಯಾಗದಿದ್ದರೆ ಹೆಲಿಕಾಪ್ಟರ್ ಮೂಲಕ ಪತ್ತೆ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಬೇಕು ಎಂದು ವಿನಂತಿಸಿದರು.