ಡೈಲಿ ವಾರ್ತೆ: 14/ಸೆ./2025

ವೀರೇಂದ್ರ ಹೆಗಡೆಯವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ಹಿದಾಯ ಫೌಂಡೇಶನ್ ನಿಯೋಗ

ಬಂಟ್ವಾಳ : ಹಿದಾಯ ಫೌಂಡೇಶನ್ ಮಂಗಳೂರು ಇದರ ನಿಯೋಗವು ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗಡೆಯವರನ್ನು ಧರ್ಮಸ್ಥಳದ ಕಛೇರಿಯಲ್ಲಿ ಬೇಟಿ ಮಾಡಿ ಫೌಂಡೇಶನ್ ವತಿಯಿಂದ ಧನ್ಯವಾದ ಸಲ್ಲಿಸಿ ಶಾಲು, ಫಲ ಪುಷ್ಪಗಳೊಂದಿಗೆ ಗೌರವ ಸಲ್ಲಿಸಿದರು.

ಕಾವಳಕಟ್ಟೆಯ ಹಿದಾಯ ಶೇರ್ ಮತ್ತು ಕೇರ್ ಕಾಲೊನಿ ಇಲ್ಲಿನ ವಿಶೇಷ ಮಕ್ಕಳ ವಸತಿಯುತ ಶಾಲೆಯ ಭಾಗಶಃ ತಡೆಗೋಡೆ ನಿರ್ಮಾಣಕ್ಕೆ ತಮ್ಮ ರಾಜ್ಯಸಭಾ ನಿಧಿಯಿಂದ ಅನುದಾನ ಮಂಜೂರಾತಿ ನೀಡಿದ‌್ದನ್ನು ಸ್ಮರಿಸಲಾಯಿತು. ಹಿದಾಯ ಫೌಂಡೇಶನ್ ನ ಬಹುಮುಖಿ ಸೇವಾ ಕಾರ್ಯಗಳ ಬಗ್ಗೆ ಮಾನ್ಯ ವೀರೇಂದ್ರ ಹೆಗಡೆಯವರಿಗೆ ಪರಿಚಯ ಮಾಡಿಕೊಡಲಾಯಿತು. ಹಾಗೂ ಸಂಸ್ಥೆಯ ವಿಶಿಷ್ಟ ಸಾಮಾಜಿಕ, ಶೈಕ್ಷಣಿಕ ಸೇವೆಗಳನ್ನು ರಾಜ್ಯಸಭಾ ಸದಸ್ಯರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ವೈಸ್ ಚೇರ್ಮನ್ ಹಾಜಿ ಮೊಹಮ್ಮದ್ ಹನೀಫ್ ಗೋಳ್ತಮಜಲು,
ಟ್ರಸ್ಟಿ ಎಫ್.ಎಂ. ಬಶೀರ್, ಸದಸ್ಯರಾದ ಹಕೀಂ ಕಲಾಯಿ ಇಲ್ಯಾಸ್ ಕಕ್ಕಿಂಜೆ ಉಪಸ್ಥಿತರಿದ್ದರು.