ಡೈಲಿ ವಾರ್ತೆ: 23/ಸೆ./2025

ಸೌಜನ್ಯಾ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ರಾಯಚೂರಿಗೆ ಗಡಿಪಾರು

ಬೆಳ್ತಂಗಡಿ: ಸೌಜನ್ಯಾ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಪುತ್ತೂರು ಎಸಿ ಆದೇಶ ಹೊರಡಿಸಿದ್ದಾರೆ. ತಿಮರೋಡಿ ಮೇಲೆ 32 ಕೇಸ್‌ ದಾಖಲಾಗಿದ್ದವು. ಹೀಗಾಗಿ ಅವರನ್ನು ಒಂದು ವರ್ಷ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಎಸಿ ಸ್ಟೆಲ್ಲಾ ವರ್ಗೀಸ್‌ ಆದೇಶಿಸಿದ್ದಾರೆ.

ಬುರುಡೆ ಪ್ರಕರಣ, ಶವ ಹೂತಿಟ್ಟ ಪ್ರಕರಣದಲ್ಲಿ ಚಿನ್ನಯ್ಯನಿಗೆ ತಿಮರೋಡಿ ಆಶ್ರಯ ನೀಡಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ತಿಮರೋಡಿ ಅವರನ್ನು ಗಡಿಪಾರು ಮಾಡಲಾಗಿದೆ. ಗಡಿಪಾರು ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅಧಿಕಾರ ತಿಮರೋಡಿಗೆ ಇರಲಿದೆ.

ಒಬ್ಬ ವ್ಯಕ್ತಿ ಮೇಲೆ ಅನೇಕ ಕ್ರಿಮಿನಲ್‌ ಪ್ರಕರಣಗಳಿದ್ದು, ಆತ ಮತ್ತೆ ಮತ್ತೆ ಕಾನೂನುಬಾಹಿರ ಕೃತ್ಯ ಎಸಗಲು ಪ್ರಯತ್ನಿಸಿದಾಗ ಅಂತಹ ವ್ಯಕ್ತಿಯನ್ನು ಗಡಿಪಾರು ಮಾಡಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ವ್ಯಕ್ತಿಯನ್ನು ಗಡಿಪಾರು ಮಾಡುವ ಮೊದಲು ನೋಟಿಸ್‌ ನೀಡಲಾಗುತ್ತದೆ. ನೋಟಿಸ್‌ಗೆ ಸಮರ್ಪಕ ಉತ್ತರ ನೀಡದಿದ್ದಲ್ಲಿ ಆ ವ್ಯಕ್ತಿಯನ್ನು ಗಡಿಪಾರು ಮಾಡಲಾಗುತ್ತದೆ. ಗಡಿಪಾರು ಆದೇಶವನ್ನು ಉಲ್ಲಂಘಿಸಿದರೆ ತಿಮರೋಡಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುವ ಅಧಿಕಾರ ಹೊಂದಿರುತ್ತಾರೆ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.