


ಡೈಲಿ ವಾರ್ತೆ: 26/ಸೆ./2025


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಎಂಎ ಗಫೂರ್ ನೇಮಕ ಸ್ವಾಗತಾರ್ಹ- ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್

ಉಡುಪಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಎಂಎ ಗಫೂರ್ ನೇಮಕ ಸ್ವಾಗತಾರ್ಹ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಜೀವನವನ್ನೇ ಸವೆಸಿರುವ ಶಂಕರ್ ಕುಂದರ್ ಅವರಿಗೂ ಮುಂದಿನ ದಿನದಲ್ಲಿ ಖಾಲಿ ಆಗಲಿರುವ ನಿಗಮ ಮಂಡಳಿ ಸ್ಥಾನ ನೀಡಿ ಗೌರವಿಸುವುದರ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎಂಎ ಗಫೂರ್ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಇನ್ನಷ್ಟು ಬಲಿಷ್ಠ ಮಾಡುವುದರಲ್ಲಿ ಅನುಮಾನ ಇಲ್ಲ. ಪಕ್ಷ ನಿಷ್ಠೆ ಅಭಿವೃದ್ಧಿ, ಸಮಾಜದಲ್ಲಿ ಶಾಂತಿ, ಸಹನೆಯಿಂದ ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಇರಬೇಕು ಎಂದು ನಿರಂತರವಾಗಿ ತಮ್ಮ ಮಾತಿನ ದಾಟಿಯಲ್ಲಿ ಸಾಮಾಜಿಕ ಭಾಷಣಗಳಲ್ಲಿ ಪ್ರತಿಪಾದಿಸುತ್ತ ಬಂದವರು.
ಆಸ್ಕರ್ ಪರ್ನಾಂಡಿಸ್ ಅವರ ಆಪ್ತರಾಗಿ ಅತ್ಯಂತ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷದ ಬೇರೆ ಬೇರೆ ಹುದ್ದೆಗಳನ್ನು ಅತ್ಯಂತ ಶ್ರದ್ದೆಯಿಂದ ನಿಭಾಯಿಸಿದವರು.
ದಿನದ 24 ಗಂಟೆಯೂ ಆಸ್ಕರ್ ಪರ್ನಾಂಡಿಸ್ ಅವರ ಜೊತೆಯಲ್ಲೇ ಇದ್ದವರು. ಯಾವುದೇ ಅಧಿಕಾರಕ್ಕೆ ಪೈಪೋಟಿ ಮಾಡಿದವರಲ್ಲ. ಆಸ್ಕರ್ ಪರ್ನಾಂಡಿಸ್ ಅವರಲ್ಲಿ ಗಫೂರ್ ಅವರು ಅಧಿಕಾರ ಕೇಳಿದ್ದರೆ 10 ವರ್ಷದ ಹಿಂದೆಯೇ ವಿಧಾನಸಭಾ ಸದಸ್ಯರೋ, ವಿಧಾನಪರಿಷತ್ ಸದಸ್ಯರೋ, ಆಗುತ್ತಿದ್ದರು. ಆದ್ದರಿಂದ ಗಫೂರ್ ಅವರಂತಹ ನಿಸ್ವಾರ್ಥವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದವರಿಗೆ ಇಂದು ಕಾಂಗ್ರೆಸ್ ಸರಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿದೆ. ಅವರ ಅವಧಿಯಲ್ಲಿ ಕರಾವಳಿ ಮತ್ತಷ್ಟು ಅಭಿವೃದ್ಧಿ ಆಗಲಿ ಎಂದು ಹೇಳಿದ್ದಾರೆ.