



ಡೈಲಿ ವಾರ್ತೆ: 28/ಸೆ./2025

ಕೊಲ್ಲೂರು| ದೇವಸ್ಥಾನಕ್ಕೆ ಬಂದಿದ್ದ ಭಕ್ತೆಯ ಚಿನ್ನ ಕಳವು ಪ್ರಕರಣ – ಆರೋಪಿ ಮಹಿಳೆ ಬಂಧನ, ಚಿನ್ನ ವಶ!

ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಚಿನ್ನ ಕಳವು ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳೊಳಗೆ ಭೇದಿಸಿದ್ದಾರೆ.
ಸೆ. 26 ರಂದು ರಾತ್ರಿ 8:50ರ ಸುಮಾರಿಗೆ ದೇವಸ್ಥಾನಕ್ಕೆ ಬಂದಿದ್ದ ದೇವಿಪ್ರಿಯಾ ಎಂಬ ಭಕ್ತೆಯ ಬ್ಯಾಗ್ನ ಜಿಪ್ ತೆರೆಯಲಾಗಿದ್ದು ಅದರಲ್ಲಿ ಇಟ್ಟುಕೊಂಡಿದ್ದ ಸುಮಾರು 3 ಪವನ್ ಹವಳದ ಚಿನ್ನದ ಸರವನ್ನು ಅಪರಿಚಿತರು ಕಳವು ಮಾಡಿದ್ದರು. ಇದರ ಮೌಲ್ಯ ಅಂದಾಜು ರೂ.2.5 ಲಕ್ಷ ಎಂದು ದೂರಿನಲ್ಲಿ ಹೇಳಲಾಗಿದೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಹಾಗೂ ಬೈಂದೂರು ವೃತ್ತ ನಿರೀಕ್ಷಕ ನೀಲೇಶ್ ಚೌಹಾಣ್ ಅವರ ಮಾರ್ಗದರ್ಶನದಲ್ಲಿ, ಕೊಲ್ಲೂರು ಠಾಣಾ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ತಂಡ ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದರು. ಶೀಘ್ರದಲ್ಲೇ ಆರೋಪಿತೆ ಯಾಧವ ದುರ್ಗಮ್ಮ ಅವರನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಿಂದ ಬಂಧಿಸಿ, ಕಳವು ಮಾಡಿದ 3 ಪವನ್ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತೆಯ ಬಂಧನ ಮತ್ತು ಚಿನ್ನ ವಶಪಡಿಸಿಕೊಳ್ಳುವ ಕಾರ್ಯ ದೂರು ದಾಖಲಾದ ಕೇವಲ 24 ಗಂಟೆಗಳೊಳಗೆ ನಡೆದಿದೆ.