ಡೈಲಿ ವಾರ್ತೆ: 11/ಅ./2025

ಕುಂದಾಪುರ| ಬೈಕಿನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿಯಾದ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

ಕುಂದಾಪುರ:ಬೈಕಿನಲ್ಲಿ ಬಂದು ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಜಯ್ ಎಲ್ ಮತ್ತು ವಸಂತ ಕುಮಾರ್ ಬಂಧಿತ ಆರೋಪಿಗಳು

ಘಟನೆ ವಿವರ:
ಮೀನಾಕ್ಷಿರವರು ಅವರ ಮಗಳು ಜ್ಯೋತಿಯೊಂದಿಗೆ ಕುಂದಾಪುರ KSRTC ಬಸ್ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ್ ಕಡೆ ನಡೆದುಕೊಂಡು ಬರುತ್ತಿದ್ದ ವೇಳೆ, BSNL ಕಚೇರಿ ಹತ್ತಿರ ಇಬ್ಬರು ಮೋಟಾರ್ ಸೈಕಲ್ ಸವಾರರು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದ್ದರು.

ಈ ದೂರಿನ ಆಧಾರದ ಮೇಲೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಜಯರಾಮ ಡಿ ಗೌಡರವರ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಸಂಜಯ್ ಎಲ್ ಮತ್ತು ವಸಂತ ಕುಮಾರ್ ಅವರನ್ನು ಕ್ರಮವಾಗಿ ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ, ಸ್ಕಾರ್ಪಿಯೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿ ಒಟ್ಟು 8 ಲಕ್ಷ 20 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಹೆಚ್‌.ಡಿ. ಕುಲಕರ್ಣಿ ಮತ್ತು ಉಡುಪಿ ಡಿವೈಎಸ್‌ಪಿ ಡಿ.ಟಿ. ಪ್ರಭು ರವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ನಂಜಾನಾಯ್ಕ್‌, ಪುಷ್ಪಾ, ನೂತನ್ ಮತ್ತು ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.