



ಡೈಲಿ ವಾರ್ತೆ: 30/ಅ./2025

ಪಾಣೆಮಂಗಳೂರು| ಸೇತುವೆಯಲ್ಲಿ ಆಟೊ ನಿಲ್ಲಿಸಿ ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ!

ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಹಳೆಯ ನೇತ್ರಾವತಿ ಸೇತುವೆ ಮೇಲೆ ಅಟೋ ರಿಕ್ಷಾ ನಿಲ್ಲಿಸಿ ಅ 29 ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಚಾಲಕ, ಮೆಲ್ಕಾರು ಸಮೀಪದ ಮಾರ್ನಬೈಲು ನಿವಾಸಿ ಪೀಟರ್ ಲೋಬೋ (60) ಅವರ ಮೃತದೇಹ ಗುರುವಾರ ತಲಪಾಡಿ ಡ್ಯಾಂ ಬಳಿ ಮರವೊಂದಕ್ಕೆ ಸಿಲುಕಿದ ರೀತಿಯಲ್ಲಿ ಪತ್ತೆಯಾಗಿದೆ.
ಬುಧವಾರ ಮುಂಜಾನೆ 5.10 ರ ವೇಳೆಗೆ ಮನೆಯಿಂದ ಹೊರಟ ಇವರು ತನ್ನ ಬ್ಯಾಟರಿ ಚಾಲಿತ ಅಟೋ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಸೇತುವೆಯ ಮೇಲೆ ಅನಾಥ ಅಟೋ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳೀಯ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಹನೀಫ್ ಅಕ್ಕರಂಗಡಿ, ನಿಸಾರ್ ಎಂ ಕೆ ಹಾಗೂ ಇಬ್ರಾಹಿಂ ಎಂ ಕೆ ಅವರ ನೇತೃತ್ವದ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಸಂಜೆವರೆಗೂ ಚಾಲಕನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.
ಗುರುವಾರ ತಲಪಾಡಿ ಡ್ಯಾಂ ಬಳಿ ಮರಕ್ಕೆ ಸಿಲುಕಿದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಕಾಣೆಯಾದ ಪೀಟರ್ ಲೋಬೋ ಅವರದ್ದೇ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತ ಪೀಟರ್ ಲೋಬೋ ಅವರು ಪಾಶ್ರ್ವವಾಯು ಪೀಡಿತರಾಗಿದ್ದು, ತನ್ನ ಖಾಯಿಲೆಯಿಂದ ಯಾರಿಗೂ ಅವಲಂಬಿತನಾಗಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪತ್ನಿ ಅನಿತಾ ಲೋಬೋ ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.