ಡೈಲಿ ವಾರ್ತೆ: 13/NOV/2025

150 ಕೋಟಿ ವಂಚನೆ ಪ್ರಕರಣ – ದೂರುದಾರನೇ ಸೈಬರ್‌ ವಂಚಕರ ಗ್ಯಾಂಗ್‌ ಸದಸ್ಯ!

ದಾವಣಗೆರೆ: ಇತ್ತೀಚೆಗೆ ನಗರದಲ್ಲಿ ಬಯಲಿಗೆ ಬಂದಿದ್ದ 150 ಕೋಟಿ ರೂ. ವಂಚನೆ ಪ್ರಕರಣದಲ್ಲಿ ದೂರುದಾರನೇ ಸೈಬರ್‌ ವಂಚಕರ ಗ್ಯಾಂಗ್‌ ಸದಸ್ಯ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ದಾವಣಗೆರೆಯ ಪ್ರಮೋದ್ ಎಂಬಾತ ಸೈಬರ್ ವಂಚಕರಿಂದ 52 ಲಕ್ಷ ರೂ. ಕಳೆದು ಕೊಂಡಿದ್ದೇನೆಂದು ಆ.29 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣದ ಜಾಡು ಹಿಡಿದ ದಾವಣಗೆರೆ ಸೆನ್ ಪೊಲೀಸರಿಗೆ ಬಗೆದಷ್ಟು ಸ್ಪೋಟಕ ಮಾಹಿತಿ ಸಿಗುತ್ತಿದೆ. ಈಗ ದೂರು ಕೊಟ್ಟ ಪ್ರಮೋದ್‌ ಸಹ ಸೈಬರ್‌ ವಂಚನೆಯ ಗ್ಯಾಂಗ್‌ ಸದಸ್ಯ ಎಂಬುದು ಗೊತ್ತಾಗಿದೆ. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ದೂರಿನ ಆದಾರದ ಮೇಲೆ ಕಾರ್ಯಾಚರಣೆಗೆ ಇಳಿದ ಸೈಬರ್ ಕ್ರೈಂ ಪೊಲೀಸರು ಬೇಲೂರು ಮೂಲದ ಸೈಯದ್ ಅರ್ಫಾತ್ ಎಂಬಾತನನ್ನು ಬಂಧಿಸಿ, ಒಂದು ಮೊಬೈಲ್ ವಶ ಪಡಿಸಿಕೊಂಡಿದ್ದರು. ಆತನ ಅಕೌಂಟ್ ನಲ್ಲಿ ಎರಡೇ ತಿಂಗಳಲ್ಲಿ ಕೋಟ್ಯಾಂತರ ರೂ. ಹಣ ವಹಿವಾಟು ಆಗಿರುವುದನ್ನು ಕಂಡು ಮತ್ತಷ್ಟು ಚುರುಕಾಗಿ ತನಿಖೆ ಆರಂಭಿಸಿದ್ದರು. ಈ ಪ್ರಕರಣದ ಮತ್ತೊಬ್ಬ ಅರೋಪಿ ಗುಜರಾತ್‍ನ ಅಹಮದಾಬಾದ್ ಮೂಲದ ಸಂಜಯ್ ಕುಂಟ್ ಬಂಧನ ಮಾಡಿದ್ದು, ವಿಚಾರಣೆ ವೇಳೆ ಕರೆಂಟ್ ಅಕೌಂಟ್‍ಗಳ ಮಾರಾಟ ದಂಧೆ ಬಯಲಾಗಿದೆ.
ದೂರುದಾರ ಪ್ರಮೋದ್ ಕೂಡ ಈ ವಂಚನೆ ಗ್ಯಾಂಗ್ ಸದಸ್ಯ ಎಂದು ತಿಳಿದು ಬಂದಿದ್ದು, ಉದ್ಯಮ ಇಲ್ಲದೇ ಇದ್ದರೂ ಬ್ಯಾಂಕ್, ಸೊಸೈಟಿಗಳಲ್ಲಿ ಕರೆಂಟ್ ಅಕೌಂಟ್ ತೆರೆದು ಮಾರಾಟ ಮಾಡುತ್ತಿದ್ದ. ಕಮಿಷನ್ ಆಸೆಗೆ ಪ್ರಮೋದ್ ಕೂಡ ವಂಚಕರ ಕೈಗೆ ಅಕೌಂಟ್ ಡಿಟೇಲ್ಸ್ ನೀಡುತ್ತಿದ್ದ. ಅಂಜನಾದ್ರಿ ಕನ್ಸ್ಟ್ರಕ್ಷನ್ಸ್ ಹೆಸರಲ್ಲಿ ಬ್ಯುಸಿನೆಸ್ ಮಾಡುತ್ತಿರೋದಾಗಿ ಪ್ರಮೋದ್ ಹೇಳಿದ್ದು, ಯಾವುದೇ ಉದ್ಯಮ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆದು ಆನ್‍ಲೈನ್ ಗೇಮ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್ ಮಾಡುತ್ತಿದ್ದ. ದುಬೈನಿಂದ ಇವರ ಕರೆಂಟ್ ಅಕೌಂಟ್‍ಗೆ ಕೋಟಿ ಕೋಟಿ ಹಣ ಜಮೆ ಆಗುತ್ತಿತ್ತು. ಅಲ್ಲದೇ ದೂರುದಾರ ಪ್ರಮೋದ್ ಕೂಡ ತನ್ನ ಕರೆಂಟ್ ಅಕೌಂಟ್ ಖಾತೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದ, ಅಕೌಂಟ್‍ನಲ್ಲಿ ಜಮೆ ಆದ ಹಣಕ್ಕೆ ಕಮಿಷನ್ ನೀಡಿಲ್ಲ ಎಂದು ಆಕ್ರೋಶ ಗೊಂಡಿದ್ದ ಪ್ರಮೋದ್. ತನ್ನ ಅಕೌಂಟ್‍ನಲ್ಲಿ ಇದ್ದ ಹಣ ವಂಚಕರು ಕದ್ದಿದ್ದಾರೆ ಎಂದು ದೂರು ನೀಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.