ಡೈಲಿ ವಾರ್ತೆ: 19/NOV/2025

ಯಕ್ಷಗಾನ ಕಲಾವಿದರು ಸಲಿಂಗಿಗಳು ಎಂಬ ಬಿಳಿಮಲೆ ಹೇಳಿಕೆ ತಪ್ಪು- ಯಕ್ಷಗಾನ ಅಕಾಡೆಮಿ ರಾಜ್ಯಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು
ಸಲಿಂಗಿಗಳು, ಅಲ್ಲಿ ಅಂತಹ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು ಉಡುಪಿಯಲ್ಲಿರುವ ಯಕ್ಷಗಾನ ಅಕಾಡೆಮಿ ರಾಜ್ಯಾದ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು,
ಬಿಳಿಮಲೆ ಅವರು ಹೇಳಿಕೆ ನೀಡಿದ್ದು ತಪ್ಪು. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಕ್ಷಗಾನದಲ್ಲಿ ಒಳ್ಳೆಯವರು ಮತ್ತು ಕೆಟ್ಟವರೂ ಇದ್ದಾರೆ. ಆದರೆ ಬಿಳಿಮಲೆಯಂತಹ ಮೇಧಾವಿ ವಿದ್ವಾಂಸರು ಈ ರೀತಿ ಹೇಳಬಾರದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಬೆಳಿಗ್ಗಿನಿಂದ ಅವರಿಗೆ ಫೋನ್ ಮೂಲಕ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅವರ ಫೋನ್ ಸ್ವಿಚ್ ಆಫ್ ಇತ್ತು. ಯಕ್ಷಗಾನದಂತಹ ಕಲೆ ಈಗ ಹೆಚ್ಚು ಪ್ರಸಿದ್ದಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ಹೇಳಿದ್ದು ತಪ್ಪು ಎಂದರು. ನೀವು ಅವರ ಬಳಿ ಕ್ಷಮೆ ಕೋರುವಂತೆ ಕೇಳುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಇಲ್ಲ ನಾನು ಅವರಷ್ಟು ದೊಡ್ಡ ವ್ಯಕ್ತಿ ಅಲ್ಲ. ಅವರು ರಾಷ್ಟ್ರ ಮಟ್ಟದ ವಿದ್ವಾಂಸರು. ಸ್ವತಃ ಅರ್ಥಧಾರಿಗಳು. ಹೀಗಾಗಿ ಅವರು ಸಂಪರ್ಕಕ್ಕೆ ಸಿಕ್ಕಿದರೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.