

ಡೈಲಿ ವಾರ್ತೆ: ಫೆ./10/2026
ಕಾರ್ಕಳದಲ್ಲಿ ಅಕ್ರಮ ಇಸ್ಪೀಟ್ ಜುಗಾರಿ ಅಡ್ಡೆ ಮೇಲೆ ಪೊಲೀಸ್ ದಾಳಿ: 8 ಮಂದಿ ಬಂಧನ, ನಗದು ಹಾಗೂ ಮೊಬೈಲ್ಗಳು ವಶ

ಕಾರ್ಕಳ, ಫೆ.10: ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್ಬೆಟ್ಟು ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಅಕ್ರಮವಾಗಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸ್ ಠಾಣಾ ಸಿಬ್ಬಂದಿ ದಾಳಿ ನಡೆಸಿ ಎಂಟು ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ.
ಫೆಬ್ರವರಿ 07 ರಂದು ರಾತ್ರಿ 8.45 ಗಂಟೆಗೆ, ಅಶೋಕ ಎಂಬುವರಿಗೆ ಸೇರಿದ ಸಾದ್ವಿನ್ ಎಂಬ ಮನೆಯ ಮೊದಲ ಮಹಡಿಯಲ್ಲಿ ಆರೋಪಿತರು ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬವರೊಂದಿಗೆ ಸೇರಿಕೊಂಡು ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ‘ಅಂದರ್ – ಬಾಹರ್’ ಎಂಬ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಮೇರೆಗೆ ಪಿಎಸ್ಐ ಮುರುಳೀಧರ ನಾಯ್ಕ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು.
ದಾಳಿಯ ವೇಳೆ ಜುಗಾರಕ್ಕೆ ಬಳಸಲಾಗುತ್ತಿದ್ದ ರೂ.22,690 ನಗದು, 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಪೀಟ್ ಎಲೆಗಳ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿಗಳು, 4 ಪ್ಲಾಸ್ಟಿಕ್ ಟೇಬಲ್ಗಳು ಹಾಗೂ 9 ಮೊಬೈಲ್ ಫೋನ್ಗಳನ್ನು ಪೊಲೀಸರು ಮುಂದಿನ ಕ್ರಮಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಘಟನೆಯ ವೇಳೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/26 ಅಡಿಯಲ್ಲಿ KP Act ಕಲಂ 79, 80 ಹಾಗೂ BNS ಕಲಂ 112 ರಂತೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ಆರೋಪಿಗಳಾದ ಉಮ್ಮರ ಫಾರೂಕ್ (62), ಅಬ್ದುಲ್ ಅಜೀಜ್ (40), ಸತೀಶ ಎಸ್. ಪ್ರಭು (49), ಅಬ್ದುಲ್ ರಹಿಮಾನ್ (49), ಸಮೀರ್ (46), ಸುಲೇಮಾನ್ (45), ಇರ್ಪಾನ್ (26) ಹಾಗೂ ಚೇತಕ್ (38) ಇವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.