ಡೈಲಿ ವಾರ್ತೆ: ಫೆ./10/2026

ದುಬೈನಲ್ಲಿ ಹೃದಯಾಘಾತ: ಬೀಜಾಡಿ ಅಹಮದ್ ಮನ್ಸೂರ್ ನಿಧನ

ಬೀಜಾಡಿ, ಫೆ.10: ದಿವಂಗತ ಬಿ.ಎಂ. ಯಾಕೂಬ್ ಸಾಹೇಬ್ ಅವರ ಪುತ್ರ, ಬೀಜಾಡಿ ನಿವಾಸಿ ಅಹಮದ್ ಮನ್ಸೂರ್ (49) ಅವರು ಫೆಬ್ರವರಿ 8ರಂದು ದುಬೈನಲ್ಲಿ ಹೃದಯಾಘಾತದಿಂದ ನಿಧನರಾದರು.

ಸುಮಾರು ಮೂರು ದಶಕಗಳಿಂದ ವಿದೇಶದಲ್ಲಿ ಉದ್ಯೋಗ ನಿರ್ವಹಿಸಿಕೊಂಡು ಬಂದಿದ್ದ ಅವರು, ಹೆಂಡತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸರಳ ಸಜ್ಜನ ಸ್ವಭಾವ, ನಗುಮುಖ ಹಾಗೂ ಸಹೃದಯ ವ್ಯಕ್ತಿತ್ವದಿಂದ ಪರಿಚಿತರಾಗಿದ್ದ ಅಹಮದ್ ಮನ್ಸೂರ್ ಅವರು ಬಂಧುಮಿತ್ರರಲ್ಲೂ ಅಪಾರ ಪ್ರೀತಿಗೆ ಪಾತ್ರರಾಗಿದ್ದರು.
ಅವರು ಚೇತನಾ ಕ್ರೀಡಾರಂಗದ ಸಕ್ರಿಯ ಸದಸ್ಯರಾಗಿದ್ದು, ರಾಜ್ಯಮಟ್ಟದ ಕ್ರಿಕೆಟ್ ಹಾಗೂ ವಾಲಿಬಾಲ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು.

ಕ್ರೀಡಾಕ್ಷೇತ್ರದಲ್ಲಿ ತಮ್ಮ ಶಿಸ್ತು, ಪ್ರತಿಭೆ ಹಾಗೂ ತಂಡಭಾವದಿಂದ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದರು ಎಂದು ಅವರ ಆಪ್ತರು ಸ್ಮರಿಸಿದ್ದಾರೆ.

ಅವರ ಅಕಾಲಿಕ ನಿಧನವು ಕುಟುಂಬಕ್ಕೆ ಮಾತ್ರವಲ್ಲದೆ, ಕ್ರೀಡಾ ವಲಯ ಹಾಗೂ ಸಮುದಾಯಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ. ಅವರ ಅಂತ್ಯಸಂಸ್ಕಾರವನ್ನು ದುಬೈಯಲ್ಲೇ ನೆರವೇರಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.