ಡೈಲಿ ವಾರ್ತೆ: ಫೆ./10/2026

ಮಾಬುಕಳ ಸೇತುವೆ ಬಳಿ ಸಿಕ್ಕ ಚಿನ್ನದ ಬಳೆ ಮರಳಿಸಿದ ವ್ಯಕ್ತಿ: ಪ್ರಾಮಾಣಿಕತೆಗೆ ಕೋಟ ಪೊಲೀಸರಿಂದ ಶ್ಲಾಘನೆ

ಕೋಟ, ಫೆ.10: ಕಳೆದುಹೋದ ಚಿನ್ನದ ಬಳೆಯನ್ನು ಪ್ರಾಮಾಣಿಕವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿ ಮಾಲೀಕರಿಗೆ ಮರಳಿಸಿದ ವ್ಯಕ್ತಿಯ ಕಾರ್ಯ ಪೊಲೀಸರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ದಿನಾಂಕ 13.01.2026ರಂದು ಬ್ರಹ್ಮಾವರ ನಿವಾಸಿ ಸುಮಾ ಅವರು ತಮ್ಮ ಸ್ಕೂಟರ್‌ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ತೆರಳುವ ವೇಳೆ ಮಾಬುಕಳ ಸೇತುವೆ ಸಮೀಪ ಎರಡು ಪವನ್ ಚಿನ್ನದ ಬಳೆ (ಅಂದಾಜು ಮೌಲ್ಯ ರೂ.1.50 ಲಕ್ಷ) ಕಳೆದುಕೊಂಡಿದ್ದರು. ಈ ಕುರಿತು ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅದೇ ದಿನ ಬನ್ನಾಡಿ ನಿವಾಸಿ ಪ್ರವೀಣ್ ಅವರು ಉಡುಪಿಯಿಂದ ಕೋಟಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿತ್ತು. ಕೆಳಗೆ ಬಿದ್ದ ಮೊಬೈಲ್ ಅನ್ನು ಎತ್ತಿಕೊಳ್ಳುವಾಗ, ರಸ್ತೆ ಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಅವರ ಗಮನಕ್ಕೆ ಬಂದಿದೆ. ಅವರು ಆ ಬಳೆಯನ್ನು ಎತ್ತಿಕೊಂಡು ಮನೆಗೆ ತೆರಳಿದ್ದರು.
ಅನಂತರ ತುರ್ತು ಕೆಲಸದ ನಿಮಿತ್ತ ಪ್ರವೀಣ್ ಅವರು ಬೆಂಗಳೂರಿಗೆ ತೆರಳಿದ್ದು, ಬಳೆಯನ್ನು ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ಈ ನಡುವೆ ಸುಮಾ ಅವರು ಬಳೆ ಕಳೆದುಕೊಂಡ ಕುರಿತು ನೀಡಿದ ದೂರಿನ ಮಾಹಿತಿ ಬೀಟ್ ಪೊಲೀಸ್ ವಾಟ್ಸಪ್ ಗ್ರೂಪ್‌ನಲ್ಲಿ ಪ್ರಸಾರಗೊಂಡಿತ್ತು.

ಈ ಮಾಹಿತಿಯನ್ನು ಗಮನಿಸಿದ ಪ್ರವೀಣ್ ಅವರು ಊರಿಗೆ ಮರಳಿದ ಕೂಡಲೇ ಕೋಟ ಪೊಲೀಸ್ ಠಾಣೆಗೆ ತೆರಳಿ ಸಿಕ್ಕಿದ್ದ ಚಿನ್ನದ ಬಳೆಯನ್ನು ಪೊಲೀಸರಿಗೆ ಒಪ್ಪಿಸಿ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ದಿನಾಂಕ 10.02.2026ರಂದು ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ಸುಮಾ ಅವರನ್ನು ಠಾಣೆಗೆ ಕರೆಸಿ, ಕಳೆದುಕೊಂಡ ಚಿನ್ನದ ಬಳೆಯನ್ನು ಬನ್ನಾಡಿ ಪ್ರವೀಣ್ ಅವರ ಕೈಯಿಂದ ಹಸ್ತಾಂತರಿಸಿದರು.

ಈ ಘಟನೆ ಪ್ರಾಮಾಣಿಕತೆ ಇನ್ನೂ ಸಮಾಜದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಠಾಣಾ ಎಸ್ಐ ಮಾಂತೇಶ್ ಜಾಭಗೌಡ, ಎಎಸ್‌ಐ ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿಗಳು ಇದ್ದರು.