ಡೈಲಿ ವಾರ್ತೆ: ಫೆ./19//2026

ಯಡ್ಯಾಡಿ – ಮತ್ಯಾಡಿ| ವಿದ್ಯಾರಣ್ಯದಲ್ಲಿ ಕಿಂಡರ್‌ಗಾರ್ಟನ್ ಪದವಿ ಪ್ರದಾನ: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಶಿಕ್ಷಣ ಪದ್ಧತಿ – ಮಾನಸಿ ಸುಧೀರ್

ಕುಂದಾಪುರ, ಫೆ.19: ಮಕ್ಕಳಲ್ಲಿ ಸಕಾರಾತ್ಮಕತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ವಿಶಿಷ್ಟ ಶಿಕ್ಷಣ ಪದ್ಧತಿ ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಅನುಸರಿಸಲಾಗುತ್ತಿದೆ ಎಂದು ನೃತ್ಯ ನಿಕೇತನ ಕೊಡವೂರಿನ ಶಾಸ್ತ್ರೀಯ ನೃತ್ಯ ಕಲಾವಿದೆ ಹಾಗೂ ಕಾಂತರ ಖ್ಯಾತಿಯ ‘ಕಮಲಕ್ಕ’ ಪಾತ್ರಧಾರಿ ಮಾನಸಿ ಸುಧೀರ್ ಹೇಳಿದರು.

ಅವರು ಗುರುವಾರ ಕುಂದಾಪುರ ತಾಲೂಕಿನ ಯಡ್ಯಾಡಿ,ಮತ್ಯಾಡಿಯ ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ ಸುಜ್ಞಾನ ಶಿಕ್ಷಣ ಸಂಸ್ಥೆ ವತಿಯಿಂದ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ನರ್ಸರಿ, ಎಲ್‌ಕೆಜಿ ಮತ್ತು ಯುಕೆಜಿ ವಿಭಾಗದ ವಿದ್ಯಾರ್ಥಿಗಳ “ಕಿಂಡರ್‌ಗಾರ್ಟನ್” ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರಣ್ಯದಲ್ಲಿ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಆತ್ಮವಿಶ್ವಾಸದಿಂದ ಬೆಳೆಯುತ್ತಿದ್ದಾರೆ. ಪ್ರತಿಯೊಂದು ಮಗುವಿನಲ್ಲಿರುವ ಉತ್ತಮ ಗುಣಗಳನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಮಕ್ಕಳಲ್ಲಿ ಪಾಸಿಟಿವಿಟಿ ಮತ್ತು ಕಾನ್ಫಿಡೆನ್ಸ್‌ ಬೆಳೆಸುವ ಈ ರೀತಿಯ ಶಿಕ್ಷಣ ಪದ್ಧತಿಯನ್ನು ನಾನು ಬೇರೆಡೆ ಕಂಡಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ‘ಆಡು ಮತ್ತು ಆಡಿನ ಮರಿ’ ಹಾಗೂ ‘ಗುಡುಗುಡು ಗುಮ್ಮಟ ದೇವರು’ ಕಥೆಗಳನ್ನು ಮನರಂಜನಾತ್ಮಕವಾಗಿ ಹೇಳಿ ಮಕ್ಕಳನ್ನು ರಂಜಿಸಿದರು. ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ಅವರ ಆಲೋಚನಾ ಶಕ್ತಿ ಹಾಗೂ ಕಲ್ಪನೆ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ವೇಗದ ಜೀವನದಲ್ಲಿ ಪೋಷಕರು ಮಕ್ಕಳಿಗೆ ಕಥೆ ಹೇಳುವ ಸಂಪ್ರದಾಯ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಪುಸ್ತಕಗಳು, ಆಡಿಯೋ ಪುಸ್ತಕಗಳು ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಮಕ್ಕಳಿಗೆ ಕಥೆಗಳನ್ನು ಪರಿಚಯಿಸಬೇಕು. ಕೇಳುವ ಸಂಸ್ಕೃತಿಯನ್ನು ಬೆಳೆಸಿದರೆ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಟಿವಿ ಮತ್ತು ಮೊಬೈಲ್‌ನಲ್ಲಿ ಅತಿಯಾದ ದೃಶ್ಯಮಾಧ್ಯಮಗಳ ಅವಲಂಬನೆಯಿಂದ ಮಕ್ಕಳ ಕಲ್ಪನೆ ಶಕ್ತಿ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ಮೂರು ವರ್ಷಗಳ ‘ನಲಿ–ಕಲಿ’ ಹಂತವನ್ನು ಪೂರ್ಣಗೊಳಿಸಿದ ಮಕ್ಕಳು ಇದೀಗ ಪ್ರಥಮ ತರಗತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶಿಕ್ಷಣ ವ್ಯವಸ್ಥೆಯ ಪರಿವರ್ತನೆಗೆ ಹೊಂದಿಕೊಳ್ಳುವಂತೆ ಈ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,” ಎಂದು ಹೇಳಿದರು.
ಮುಂದಿನ ವರ್ಷಗಳಲ್ಲಿ ಸಂಸ್ಥೆಯಲ್ಲಿ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳು ಪಿಯುಸಿ ಹಂತಕ್ಕೆ ತಲುಪುವ ವೇಳೆಗೆ ಅಗತ್ಯವಿರುವ ಅಖಿಲ ಭಾರತೀಯ ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ತಯಾರಾಗುವಂತೆ ಸಮಗ್ರ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಕುರಿತು ಮಕ್ಕಳಿಗೆ ನಿರಂತರವಾಗಿ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ಶನಿವಾರ ವಿವಿಧ ಕ್ಷೇತ್ರಗಳ ಪರಿಣಿತರನ್ನು ಆಹ್ವಾನಿಸಿ, ಸುಮಾರು 20ಕ್ಕೂ ಅಧಿಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
“ಮಕ್ಕಳು ಭವಿಷ್ಯದಲ್ಲಿ ದೊಡ್ಡ ಕಲಾವಿದರು ಹಾಗೂ ಸಮಗ್ರ ವ್ಯಕ್ತಿತ್ವ ಹೊಂದಿದ ನಾಗರಿಕರಾಗಬೇಕು ಎಂಬುದು ನಮ್ಮ ಆಶಯ,” ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆ ಕೋಶಾಧಿಕಾರಿ ಭರತ್ ಶೆಟ್ಟಿ ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯರಾದ ಪ್ರದೀಪ್ ಕುಮಾರ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ದೀಕ್ಷಾ ಅನಿಲ್ ನಿರೂಸಿದರು
ಶಿಕ್ಷಕಿ ಶ್ರೀಮತಿ ಪ್ರಿಯಾಂಕ ಭಟ್ ವಂದಿಸಿದರು.
ಸಭಾಕಾರ್ಯಕ್ರಮದ ನಂತರ ಪುಟಾಣಿ ಮುದ್ದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತ್ತು.