ಡೈಲಿ ವಾರ್ತೆ: ಫೆ./22/2026

“ಪ್ರಕೃತಿ ಮಡಿಲಿನಲ್ಲಿ” ನಾಯಕತ್ವದ ಪಾಠ: ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸ್ಕೌಟ್ಸ್ ದಿನಾಚರಣೆ:
ಅಂಕಗಳಿಗಿಂತ ವ್ಯಕ್ತಿತ್ವ ನಿರ್ಮಾಣ ಮುಖ್ಯ – ಇಂದ್ರಾಳಿ ಜಯಕರ್ ಶೆಟ್ಟಿ

ಕುಂದಾಪುರ, ಫೆ.22: ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸ್ಥಾಪಕರ ದಿನ, ವಿಶ್ವ ಚಿಂತನಾ ದಿನ ಹಾಗೂ ಅಂತರರಾಷ್ಟ್ರೀಯ ಸ್ನೇಹ ದಿನವನ್ನು ಭಾನುವಾರ ಯಡಾಡಿ-ಮತ್ಯಾಡಿ ವಿದ್ಯಾರಣ್ಯ ಕ್ಯಾಂಪಸ್‌ನ ಹಸಿರು ಪರಿಸರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಖ್ಯ ಆಯುಕ್ತೆ ಇಂದ್ರಾಳಿ ಜಯಕರ ಶೆಟ್ಟಿ ಅವರು, ಸುಮಾರು 120 ವರ್ಷಗಳ ಹಿಂದೆ ಕೇವಲ 20 ಸದಸ್ಯರೊಂದಿಗೆ ರಾಬರ್ಟ್ ಬೇಡನ್ ಪೌಲ್ ಆರಂಭಿಸಿದ ಸ್ಕೌಟ್ಸ್ ಚಳವಳಿ ಇಂದು ವಿಶ್ವದಾದ್ಯಂತ 60 ಮಿಲಿಯನ್‌ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಮಹತ್ವದ ಜಾಗತಿಕ ಚಳವಳಿಯಾಗಿದೆ ಎಂದು ಹೇಳಿದರು. ಸ್ಕೌಟ್ಸ್ ಚಳವಳಿ ವಿದ್ಯಾರ್ಥಿಗಳಲ್ಲಿ ಪ್ರೀತಿ, ಸಂಯಮ, ಸೇವಾಭಾವ ಹಾಗೂ ಸಹಬಾಳ್ವೆ ಗುಣಗಳನ್ನು ಬೆಳೆಸುತ್ತದೆ. ಜಾತಿ-ಬಣ್ಣ- ಭಿನ್ನಾಭಿಪ್ರಾಯಗಳ ನಡುವೆಯೂ ಸಮಾನತೆಯನ್ನು ಪ್ರತಿಬಿಂಬಿಸುವ ಸಮವಸ್ತ್ರ ಸ್ಕೌಟಿಂಗ್‌ನ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಣವೆಂದರೆ ಕೇವಲ ಅಂಕಗಳಿಸುವುದು ಮಾತ್ರ ಅಲ್ಲ, ಪಾಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಾಸ ಸಾಧಿಸುವುದು ಮುಖ್ಯ. ರಾಜ್ಯದಲ್ಲಿ ಸುಮಾರು 8 ಲಕ್ಷ ಸದಸ್ಯರು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಉಡುಪಿ ಜಿಲ್ಲೆಗೆ 55 ಸಾವಿರ ಸದಸ್ಯತ್ವ ಗುರಿ ನಿಗದಿಯಾಗಿದೆ ಎಂದರು.

ಕುಂದಾಪುರ ರೇಂಜ್ ಫಾರೆಸ್ಟ್ ಅಧಿಕಾರಿ ರಾಘವೇಂದ್ರ ಎಂ. ನಾಯಕ್ ಅವರು ಸಂವಿಧಾನದ 51(ಎ)(ಜಿ) ವಿಧಿಯನ್ನು ಉಲ್ಲೇಖಿಸಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ಹಸಿ-ಒಣ ಕಸ ವಿಂಗಡಣೆ, ನೀರು-ವಿದ್ಯುತ್ ಸಂರಕ್ಷಣೆ ಹಾಗೂ ಗಿಡ ನೆಡುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಉಡುಪಿ-ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಕಾರ್ಯಕರ್ತೆ ಸುಮನ್ ಶೇಖರ್ ಅವರು, ಸ್ಕೌಟಿಂಗ್ ಪ್ರಕೃತಿ ಮಡಿಲಿನಲ್ಲಿ ಜೀವನ ಮೌಲ್ಯಗಳನ್ನು ಕಲಿಸುವ ಚಳವಳಿಯಾಗಿದೆ. ಶಿಸ್ತು, ಸೇವಾಭಾವ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಈ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕೆಂದು ಆಶಿಸಿದರು.

ಸುಜ್ಞಾನ ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಅವರು, “ಭವಿಷ್ಯದ ಸವಾಲುಗಳಿಗೆ ಶಿಸ್ತು ಮತ್ತು ಆತ್ಮವಿಶ್ವಾಸವೇ ಶಕ್ತಿಯಾಗಿದೆ” ಎಂದು ತಿಳಿಸಿದರು. ಸ್ಕೌಟ್ಸ್ ತರಬೇತಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿತನ ಮತ್ತು ನಾಯಕತ್ವ ಬೆಳೆಸುತ್ತದೆ ಎಂದರು. ಮುಂದಿನ ಹಂತದಲ್ಲಿ ರೇಂಜರ್ಸ್ ಹಾಗೂ ರೋವರ್ಸ್ ಘಟಕಗಳನ್ನು ಪ್ರಾರಂಭಿಸುವ ಉದ್ದೇಶವಿದೆ ಎಂದು ಹೇಳಿದರು.

ಸುಜ್ಞಾನ ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಚಳವಳಿಯ ಮೂಲ ಉದ್ದೇಶ ಸೇವಾಭಾವ, ಶಿಸ್ತು ಮತ್ತು ಸಮಾಜಮುಖಿ ಚಿಂತನೆ ಬೆಳೆಸುವುದಾಗಿದೆ.
ವಿದ್ಯಾರ್ಥಿಗಳು ಸ್ಕೌಟಿಂಗ್‌ನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗಿದ್ದು, ಅವರ ಸೇವಾ ಮನೋಭಾವ ಮತ್ತು ಶಿಸ್ತನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಯೊಂದು ಕಾರ್ಯಕ್ರಮದಿಂದ ಪಾಠ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು, ಸ್ಕೌಟ್ಸ್ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಅವಶ್ಯಕವೆಂದರು. ಎನ್‌ಡಿಎ ಹಾಗೂ ಎಸ್‌ಎಸ್‌ಬಿ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಕೌಟಿಂಗ್ ಹಾಗೂ ಎನ್‌ಸಿಸಿ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಹಸಿರು ವಠಾರದಲ್ಲಿ ನಡೆದ ಸಾಹಸ ಕ್ರೀಡೆಗಳು, ಮನರಂಜನಾ ಆಟಗಳು ಹಾಗೂ ಬೆಂಕಿಯ ಒಲೆಯಲ್ಲಿ ಮತ್ತು ಬೆಂಕಿಯಿಲ್ಲದೆ ತಯಾರಿಸಿದ ತಿಂಡಿ ತಿನಿಸುಗಳು ಗಮನ ಸೆಳೆದವು. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಆಹಾರವನ್ನು ಅತಿಥಿಗಳು ಸವಿದರು.
ಹರೀಶ್ ಕಲ್ಯಾಣಪುರ ಸ್ವಾಗತಿಸಿದರು. ಶಿಕ್ಷಕ ರಜತ್ ಭಟ್ ಕಾರ್ಯಕ್ರಮ ನಿರೂಪಿಸಿದರು. ತರಬೇತುದಾರೆ ಪವಿತ್ರ ವಂದಿಸಿದರು.