ಡೈಲಿ ವಾರ್ತೆ: ಫೆ./23/2026

ವಾರಾಹಿ ಹೊಳೆಯಲ್ಲಿ ಮುಳುಗಿದ ಯುವಕ ಚಿಕಿತ್ಸೆ ಫಲಿಸದೆ ಸಾವು

ಅಮಾಸೆಬೈಲು, ಫೆ.23: ಹೊಸಂಗಡಿ ಗ್ರಾಮದ ಭಾಗೀಮನೆ ಸಮೀಪದ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಬಡ್ಡಎಂಬವರ ಪುತ್ರ ಸುಧೀರ್ (26) ಎಂದು ಗುರುತಿಸಲಾಗಿದೆ.

ಫೆಬ್ರವರಿ 15ರಂದು ಸುಧೀರ್ ತೊಂಬಟ್ಟು ವಾರಾಹಿ ಹೊಳೆಗೆ ಈಜಾಡಲು ತೆರಳಿದ್ದರು. ಈ ವೇಳೆ ಈಜು ಸರಿಯಾಗಿ ಬಾರದೇ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರೆಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದವರು ತಕ್ಷಣ ರಕ್ಷಿಸಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಧೀರ್ ಅವರು ಫೆಬ್ರವರಿ 21ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಘಟನೆಗೆ ಸಂಬಂಧಿಸಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕದ ವಾತಾವರಣ ಮನೆಮಾಡಿದೆ.