ಡೈಲಿ ವಾರ್ತೆ: ಮಾ./02/2026

ಉಡುಪಿ ಎನ್‌ಸಿಸಿ ಕ್ಯಾಡೆಟ್‌ಗಳ ಕಾರವಾರ ನೌಕಾ ತಳಕ್ಕೆ ಭೇಟಿ: ಐಎನ್‌ಎಸ್ ವಿಕ್ರಮಾದಿತ್ಯ ವೀಕ್ಷಿಸಿ ಸಮುದ್ರ ರಕ್ಷಣಾ ಸಾಮರ್ಥ್ಯದ ಅರಿವು

ಉಡುಪಿ, ಮಾ.2: ರಾಷ್ಟ್ರದ ಸಮುದ್ರ ರಕ್ಷಣಾ ಸಾಮರ್ಥ್ಯದ ಸಮಗ್ರ ಪರಿಚಯವನ್ನು ನೀಡುವ ಉದ್ದೇಶದಿಂದ 6 ಕರ್ನಾಟಕ ನೌಕಾ ಘಟಕ ಎನ್‌ಸಿಸಿ ವತಿಯಿಂದ 161 ಕ್ಯಾಡೆಟ್‌ಗಳು, 18 ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳು (ಎಎನ್‌ಒ) ಹಾಗೂ ಪರ್ಮನಂಟ್ ಇನ್‌ಸ್ಟ್ರಕ್ಟರ್ ಸಿಬ್ಬಂದಿಗಳೊಂದಿಗೆ ಫೆಬ್ರವರಿ 28ರಂದು ಕಾರವಾರ ನೌಕಾ ತಳಕ್ಕೆ ಶೈಕ್ಷಣಿಕ ಭೇಟಿ ನೀಡಿದರು.

ಭೇಟಿಯ ಪ್ರಮುಖ ಆಕರ್ಷಣೆಯಾಗಿ ಕಾರವಾರದ ನೌಕಾ ತಳದಲ್ಲಿ ನೆಲೆಸಿರುವ ಭವ್ಯ ವಿಮಾನವಾಹಕ ಯುದ್ಧನೌಕೆ INS Vikramaditya ವೀಕ್ಷಿಸಲಾಯಿತು.

ಸಮುದ್ರದ ಮಹಾಕಾಯವೆನಿಸಿದ ಈ ಯುದ್ಧನೌಕೆ ತನ್ನ ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯಗಳು ಹಾಗೂ ವಿಶಾಲ ಕಾರ್ಯಪದ್ಧತಿಗಳ ಮೂಲಕ ಯುವ ಕ್ಯಾಡೆಟ್‌ಗಳನ್ನು ಆಕರ್ಷಿಸಿತು.

ಶೈಕ್ಷಣಿಕ ಭೇಟಿಯ ಸಂದರ್ಭದಲ್ಲಿ ಕ್ಯಾಡೆಟ್‌ಗಳು ನೌಕೆಯ ವಿವಿಧ ವಿಭಾಗಗಳು, ಯುದ್ಧೋಪಕರಣಗಳು ಮತ್ತು ಕಾರ್ಯಾಚರಣಾ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ನೌಕಾಪಡೆಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದ ಅವರು, ನೌಕಾಪಡೆಯಲ್ಲಿ ಪಾಲಿಸಲಾಗುವ ಶಿಸ್ತು, ವೃತ್ತಿಪರತೆ ಮತ್ತು ತಂಡಭಾವವನ್ನು ನೇರವಾಗಿ ಅನುಭವಿಸಿದರು. ಈ ಅನುಭವವು ಹಲವಾರು ಕ್ಯಾಡೆಟ್‌ಗಳಲ್ಲಿ ನೌಕಾ ಜೀವನ ಹಾಗೂ ಸಮುದ್ರ ಕಾರ್ಯಾಚರಣೆಗಳ ವೈಶಿಷ್ಟ್ಯತೆ ಕುರಿತು ಹೆಚ್ಚಿನ ಆಸಕ್ತಿ ಮೂಡಿಸಿದೆ.

ಈ ಪ್ರವಾಸವನ್ನು ಘಟಕದ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ಅವರ ಮಾರ್ಗದರ್ಶನದಲ್ಲಿ ಹಾಗೂ ಎಕ್ಸಿಕ್ಯೂಟಿವ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಎಂ.ಎ. ಮುಲ್ತಾನಿ ಅವರ ಸಹಕಾರದೊಂದಿಗೆ ಸಮರ್ಪಕವಾಗಿ ಆಯೋಜಿಸಲಾಯಿತು.

ಕ್ಯಾಡೆಟ್‌ಗಳಿಗೆ ಪ್ರಾಯೋಗಿಕ ತರಬೇತಿ ಹಾಗೂ ಸೈನಿಕ ಜೀವನದ ನೈಜ ಅನುಭವವನ್ನು ಒದಗಿಸುವ ನಿಟ್ಟಿನಲ್ಲಿ ಘಟಕವು ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
ಇದಕ್ಕೂ ಮುನ್ನ ಕಳೆದ ವರ್ಷ ದೇಶದ ಸ್ವದೇಶಿ ವಿಮಾನವಾಹಕ ನೌಕೆ INS Vikrant ಗೆ ಸಹ ಶೈಕ್ಷಣಿಕ ಭೇಟಿ ಆಯೋಜಿಸಲಾಗಿತ್ತು. ದೇಶದ ನೌಕಾ ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸಿ ದೇಶಭಕ್ತಿಯ ಮನೋಭಾವವನ್ನು ಬಲಪಡಿಸುವ ದಿಸೆಯಲ್ಲಿ ಎನ್‌ಸಿಸಿ ಕಾರ್ಯನಿರ್ವಹಿಸುತ್ತಿದೆ.