ಡೈಲಿ ವಾರ್ತೆ: ಮಾ./05/2026

ವಾರಾಹಿ ವಿಳಂಬಕ್ಕೆ ಬಿಜೆಪಿ ವೈಫಲ್ಯವೇ ಕಾರಣ: ಸಿದ್ದಾಪುರದಲ್ಲಿ ವಿನಯ ಕುಮಾರ್ ಸೊರಕೆ ವೀರೋಚಿತ ವಾಗ್ದಾಳಿ

​ಸಿದ್ದಾಪುರ: “ಅರಣ್ಯ ಇಲಾಖೆಯ ಅನುಮತಿ ಪಡೆಯುವಲ್ಲಿನ ವಿಳಂಬ ಹಾಗೂ ಮೂಲ ಯೋಜನೆಯಲ್ಲಿ ಸಂಸದ ರಾಘವೇಂದ್ರ ಅವರು ಮಾಡಿದ ಬದಲಾವಣೆಗಳಿಂದಾಗಿ ವಾರಾಹಿ ಯೋಜನೆಯ ಸಮಸ್ಯೆ ಇಂದಿಗೂ ಬಗೆಹರಿಯದೆ ಉಳಿದಿದೆ,” ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
​ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಕಂಡ್ಲೂರಿನಿಂದ ಸಿದ್ದಾಪುರದವರೆಗೆ ಎರಡು ದಿನಗಳ ಕಾಲ ನಡೆದ ‘ನೀರಿಗಾಗಿ ನಮ್ಮ ನಡಿಗೆ’ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ​ಜಿಲ್ಲೆಯ 13 ನದಿಗಳ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನೀರಿನ ಬವಣೆ ನೀಗಿಸಲು ಹಲವು ಯೋಜನೆಗಳಿಗೆ ಅವಕಾಶವಿದೆ ಎಂದು ಪ್ರತಿಪಾದಿಸಿದ ಸೊರಕೆ, “ಚಡ್ಡಿ ಹಾಕಿ ದೊಣ್ಣೆ ಬೀಸುವವರಿಗೆ ನೀರಾವರಿಯ ಬಗ್ಗೆ ಅರಿವಿಲ್ಲ. ಸರ್ಕಾರಿ ಭೂಮಿಯನ್ನು ದಬ್ಬಾಳಿಕೆಯಿಂದ ವಶಪಡಿಸಿಕೊಳ್ಳುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ,” ಎಂದರು. ಅಲ್ಲದೆ, ಸಮಾಜಸೇವಕ ಜಿ. ಶಂಕರ್ ಅವರ ವಿರುದ್ಧದ ಟೀಕೆಗಳನ್ನು ಖಂಡಿಸಿದ ಅವರು, ಬಲದಂಡೆ ಯೋಜನೆ ಶೀಘ್ರ ಜಾರಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಳು ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಶಾಸಕ ಗಂಟಿಹೊಳೆ ತಂಡಕ್ಕೆ ಗೋಪಾಲ್ ಪೂಜಾರಿ ಬಹಿರಂಗ ಸವಾಲು

ವಾರಾಹಿ ಉಳಿಸಿ ಆಂದೋಲನದ ಬೃಹತ್ ಪಾದಯಾತ್ರೆಯ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ ಸಿದ್ದಾಪುರ ಏತ ನೀರಾವರಿ ಯೋಜನೆಯ ಡಿಪಿಆರ್ ಬದಲಾವಣೆಗೆ ನಾನು ಪತ್ರ ಬರೆದಿದ್ದೇನೆ ಎಂದು ಸುಳ್ಳು ಹಬ್ಬಿಸುತ್ತಿರುವ ಶಾಸಕ ಗುರುರಾಜ್ ಗಂಟಿಹೊಳೆ ಅವರ ತಂಡಕ್ಕೆ ನನ್ನದೊಂದು ನೇರ ಸವಾಲಿದೆ. ಒಂದು ವೇಳೆ ನಾನು ಅಂತಹ ಪತ್ರ ಬರೆದಿರುವುದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲವಾದಲ್ಲಿ, ಸಾರ್ವಜನಿಕವಾಗಿ ಸುಳ್ಳು ಹೇಳಿದ ಅವರು ಜನರ ಮುಂದೆ ಕ್ಷಮೆಯಾಚಿಸಲಿ,” ಎಂದು ಮಾಜಿ ಶಾಸಕ ಗೋಪಾಲ್ ಪೂಜಾರಿ ಗುಡುಗಿದರು. ​

ಬೈಂದೂರು ಶಾಸಕ ಗಂಟಿಹೊಳೆ ವಿರುದ್ಧ ಹರಿಹಾಯ್ದ ಅವರು, “ಇಂದಿಗೂ ಊಳಿಗಮಾನ್ಯ ಪದ್ಧತಿಯ ಭ್ರಮೆಯಲ್ಲಿರುವ ಶಾಸಕರು ಕೈಕಾಲು ಮುರಿಯುವ ಬೆದರಿಕೆ ಹಾಕುತ್ತಿದ್ದಾರೆ. ರೈತರ ಪರವಿರುವ ಕಾಂಗ್ರೆಸ್ ಅನ್ನು ಒಡೆಯುವ ಪ್ರಯತ್ನ ಮಾಡಬೇಡಿ,” ಎಂದು ಎಚ್ಚರಿಸಿದರು.

​ಅವೈಜ್ಞಾನಿಕ ಯೋಜನೆಗಳ ವಿರುದ್ಧ ವಾಗ್ದಾಳಿ:

ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಮಾತನಾಡಿ, “ಸಿದ್ದಾಪುರ ಏತ ನೀರಾವರಿ ಯೋಜನೆಯ ಡಿಪಿಆರ್ ಬದಲಾಯಿಸಿ 4,000 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬೇಕು. ಜಲಜೀವನ್ ಮಿಷನ್ ಅಡಿಯಲ್ಲಿ ನಳ್ಳಿಗಳಿವೆಯೇ ಹೊರತು ನೀರಿಲ್ಲ. ಹೋರಿಯಬ್ಬೆಯ ಡೈವರ್ಶನ್ ವಿಯರ್‌ನಿಂದ ನೀರು ಎತ್ತುವುದು ಸಂಪೂರ್ಣ ಅವೈಜ್ಞಾನಿಕ,” ಎಂದು ಟೀಕಿಸಿದರು. ವಾರಾಹಿ ಯೋಜನೆಯ ಕುರಿತು ನೇರ ಸಂವಾದಕ್ಕೆ ಬರಲು ಅವರು ಸವಾಲು ಹಾಕಿದರು.

​ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ:

ಪಾದಯಾತ್ರೆ ಸಿದ್ದಾಪುರಕ್ಕೆ ತಲುಪಿದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಪ್ರತಿಭಟನಾಕಾರರ ಅಹವಾಲುಗಳನ್ನು ಸ್ವೀಕರಿಸಿದರು. ರೈತರ ಮತ್ತು ಸ್ಥಳೀಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ವಹಿಸಿದ್ದರು.

ವಾರಾಹಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಬಲಾಡಿ ಪ್ರಾಸ್ತವಿಕ ನುಡಿಯನ್ನಾಡಿದರು.
ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಕಾರ್ಯಕ್ರಮವನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅಶೋಕ್ ಪೂಜಾರಿ ಬೀಜಾಡಿ, ಚಿಟ್ಟೆ ರಾಜಗೋಪಾಲ್‌ ಹೆಗ್ಡೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸೂರಜ್ ಜಿ. ಪೂಜಾರಿ, ಅರವಿಂದ ಪೂಜಾರಿ ಪಡುಕೋಣೆ, ಸಂತೋಷ್‌ ಕುಮಾರ್‌ ಶೆಟ್ಟಿ ಹಕ್ಲಾಡಿ, ವಂಡಬಳ್ಳಿ ಜಯರಾಮ್ ಶೆಟ್ಟಿ, ನವೀನ್ ಸಾಲಿಯಾನ್, ಮಂಜುನಾಥ್ ಶೆಟ್ಟಿ ಗುಡಿಬೆಟ್ಟು, ಅನಂತ ಮೋವಾಡಿ, ವಾಸುದೇವ ಪೈ ಸಿದ್ದಾಪುರ, ಹರೀಶ್ ತೋಳಾರ್ ಕೊಲ್ಲೂರು, ಭರತ್ ದೇವಾಡಿಗ, ಶೇಖರ ಪೂಜಾರಿ, ರಘುರಾಮ್ ಶೆಟ್ಟಿ ಬಿಜೂರು, ಗಣಪತಿ‌ ಟಿ ಶ್ರೀಯಾನ್, ಸುಧೀಶ್ ಗುಲ್ವಾಡಿ, ಉದಯ ಪೂಜಾರಿ ಚಿತ್ತೂರು, ದಿನೇಶ್ ನಾಯ್ಕ್ ಹಳ್ಳಿಹೊಳೆ, ನಾಗರಾಜ್ ಗಾಣಿಗ, ಜ್ಯೋತಿ ನಾಯ್ಕ್, ಸೂರ್ಯಕಾಂತಿ ಬೈಂದೂರು, ಹೇಮಾವತಿ ಪೂಜಾರಿ ಹಳ್ಳಿಹೊಳೆ, ಹನೀಫ್ ಗುಲ್ವಾಡಿ, ಅಫ್ಝಲ್ ಹೈಕಾಡಿ, ಮುಸ್ತಾಕ್ ಕಂಡ್ಲೂರು, ಕಾನಿಷ್ಕ ಕೆ ಹೆಗ್ಡೆ ಬೈಲೂರು, ಅಕ್ಷಯ್ ಶೆಟ್ಟಿ, ಅನೀಶ್ ಪೂಜಾರಿ ಬೈಂದೂರು, ಪ್ರಶಾಂತ ಪೂಜಾರಿ‌ ಕರ್ಕಿ, ಮೋಹನ್ ಪೂಜಾರಿ ಉಪ್ಪುಂದ, ಹರಿಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಡಿವೈಎಸ್ಪಿ ಹೆಚ್.ಡಿ. ಕುಲಕರ್ಣಿ ಮತ್ತು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಭದ್ರತೆಯ ಉಸ್ತುವಾರಿ ವಹಿಸಿದ್ದರು.