ಡೈಲಿ ವಾರ್ತೆ: ಮಾ./05/2026

ಯುದ್ಧದ ನೆಪವೊಡ್ಡಿ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಹಗಲು ದರೋಡೆ: ಬೆಲೆ ಏರಿಕೆ ನೆಪದಲ್ಲಿ ಗ್ರಾಹಕರ ಸುಲಿಗೆಗೆ ಎಸ್‌ಡಿಟಿಯು ಆಕ್ರೋಶ,ಪ್ರತಿಭಟನೆ ಎಚ್ಚರಿಕೆ!

​ಮಂಗಳೂರು, ಮಾಚ್ 5: ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಜಿಲ್ಲೆಯ ಕೆಲವು ಗ್ಯಾಸ್ ಪಂಪ್‌ಗಳಲ್ಲಿ ಅಕ್ರಮವಾಗಿ ದರ ಹೆಚ್ಚಳ ಮಾಡಿ ಗ್ರಾಹಕರನ್ನು ಲೂಟಿ ಮಾಡಲಾಗುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಮಂಗಳೂರು ನಗರ ಜಿಲ್ಲಾ ಸಮಿತಿ ಗಂಭೀರವಾಗಿ ಆರೋಪಿಸಿದೆ.

​ಮಧ್ಯಪ್ರಾಚ್ಯ ದೇಶಗಳ ಸಂಘರ್ಷದಿಂದಾಗಿ ತೈಲ ಸರಬರಾಜಿನಲ್ಲಿ ಕೊರತೆಯಾಗಿದೆ ಎಂಬ ಸುಳ್ಳು ಕಾರಣಗಳನ್ನು ನೀಡಿ, ಗ್ಯಾಸ್ ಪಂಪ್ ವಿತರಕರು ತಾವೇ ಇಚ್ಛಿಸಿದ ದರವನ್ನು ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಾಲಕರು ಮತ್ತು ವಿತರಕರ ನಡುವೆ ನಡೆದಿರುವ ವಾಗ್ವಾದದ ವೀಡಿಯೊಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

​ಸರಕಾರದ ಆದೇಶವಿಲ್ಲದೆ ದರ ಹೆಚ್ಚಳ:
​ಸರಕಾರದಿಂದ ಯಾವುದೇ ಅಧಿಕೃತ ಬೆಲೆ ಏರಿಕೆಯ ಆದೇಶ ಹೊರಬೀಳದಿದ್ದರೂ, ಕೆಲವು ಪಂಪ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ. ಈ ಹಿಂದೆ ಕೂಡ ದರ ಪರಿಷ್ಕರಣೆಯಾದಾಗ ಹಳೆಯ ದರವನ್ನೇ ಮುಂದುವರಿಸಿ ಗ್ರಾಹಕರಿಂದ ಹಣ ಲೂಟಿ ಮಾಡಿದ ಇತಿಹಾಸ ಇಂತಹ ಪಂಪ್‌ಗಳಿಗಿದೆ ಎಂದು SDTU ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನ ಕಿಡಿಕಾರಿದ್ದಾರೆ.

​SDTU ಎಚ್ಚರಿಕೆ ಮತ್ತು ಆಗ್ರಹ:
​ಈ ಹಗರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಅಕ್ರಮ ಎಸಗುತ್ತಿರುವ ಗ್ಯಾಸ್ ಪಂಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇರ್ಫಾನ್ ಕಾನ ಆಗ್ರಹಿಸಿದ್ದಾರೆ. ಒಂದು ವೇಳೆ ಈ ದೋಚುವಿಕೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
​”ಜಿಲ್ಲಾಧಿಕಾರಿಯವರು ದರ ಪರಿಷ್ಕರಣೆಯಾದ ಸಂದರ್ಭದಲ್ಲಿ ಕೇವಲ ಸುತ್ತೋಲೆಗೆ ಸೀಮಿತವಾಗದೆ, ಮಾಧ್ಯಮಗಳ ಮೂಲಕ ಅಧಿಕೃತ ಪ್ರಕಟಣೆ ನೀಡಬೇಕು. ಇದರಿಂದ ಗ್ರಾಹಕರಿಗೆ ನಿಖರವಾದ ದರದ ಮಾಹಿತಿ ಲಭ್ಯವಾಗಿ ಲೂಟಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸ್ದಟು ಉಪಾಧ್ಯಕ್ಷರಾದ ಇರ್ಫಾನ್ ಕಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.