

ಡೈಲಿ ವಾರ್ತೆ: ಮಾ./05/2026

ವಾಲ್ಮೀಕಿ ಜನಾಂಗಕ್ಕೆ ಪರಿಷ್ಕೃತ ಮೀಸಲಾತಿಯಂತೆ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡದಿದ್ದರೆ ಉಗ್ರ ಹೋರಾಟ

ಬೆಂಗಳೂರು,ಮಾ.5: ಜಸ್ಟೀಸ್ ನಾಗಮೋಹನ್ ದಾಸ್ ಸಮಿತಿ ವರದಿ ಆಧಾರದ ಮೇಲೆ ಹೆಚ್ಚಿಸಲಾಗಿರುವ ಮೀಸಲಾತಿ ಪ್ರಮಾಣವನ್ನು ಅಳವಡಿಸಿಕೊಂಡು ಸರ್ಕಾರಿ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗಕ್ಕೆ ಭಾರೀ ಅನ್ಯಾವಾಗಲಿದೆ ಎಂದು ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಬೆಳ್ಳಿ ಗಂಗಾಧರ ಅವರು, ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಸದುದ್ದೇಶವನ್ನು ಉಚ್ಛನ್ಯಾಯಾಲಯದ ಅವಗಾಹನೆಗೆ ತಂದು ಇದೀಗ ಉದ್ಭವಸಿರುವ ತೊಂದರೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪರಿಶಿಷ್ಟ ವಾಲ್ಮೀಖಿ ಸಮಾಜಕ್ಕೆ ಆಗಲಿರುವ ಅನ್ಯಾಯದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42.49 ಲಕ್ಷ ಮತ್ತು ಪರಿಶಿಷ್ಟ ಜಾತಿ ಜನಸಂಖ್ಯೆ 1.04 ಕೋಟಿಗಳಿಗೂ ಹೆಚ್ಚಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಅನುಕ್ರಮವಾಗಿ ಶೇಕಡ 7 ಮತ್ತು ಶೇಕಡ 17 ರಷ್ಟಿದೆ. ಅದರ ವ್ಯಾಪ್ತಿಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಈ ಜನಾಂಗದವರ ಪ್ರಾತಿನಿಧ್ಯತೆ ಇವರ ಜನಸಂಖ್ಯೆಗೆ ಅನುಗುಣವಾಗಿ ಇಲ್ಲದೇ ಇರುವುದನ್ನು ಸರ್ಕಾರದ ಗಮನಕ್ಕೆ ಕಾಲ ಕಾಲಕ್ಕೆ ತಂದಿದ್ದರೂ ಸಹ 1954 ರಲ್ಲಿ ನಿಗದಿ ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7 ಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17 ಕ್ಕೆ ಹೆಚ್ಚಿಸದೇ ಇದ್ದ ಕಾರಣ 2022 ರಲ್ಲಿ ತಮ್ಮ ನೇತೃತ್ವದಲ್ಲಿ ಸಮುದಾಯಗಳು ನಡೆಸಿದ 257 ದಿನಗಳ ಸುಧೀರ್ಘ ಹೋರಾಟದ ಫಲವಾಗಿ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಏಕ ಸದಸ್ಯ ಆಯೋಗ ರಚಿಸಿ, ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಪರಿಶಿಷ್ಟ ಪಂಗಡದವರಿಗೆ ಚಾಲ್ತಿಯಲ್ಲಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17 ಕ್ಕೆ ಹೆಚ್ಚಿಸಿತು ಎಂದರು.
ಈ ಆದ್ಯಾದೇಶದ ಮೇರೆಗೆ ನೇಮಕಾತಿಗಳಲ್ಲಿ ರೋಸ್ಟರ್ ಬಿಂದುಗಳನ್ನು ನೇರನೇಮಕಾತಿ ಮತ್ತು ಬಡ್ತಿ ನೇಮಕಾತಿಗಳಲ್ಲಿ ಹೊಸದಾಗಿ ಅಳವಡಿಸಿಕೊಂಡು ನೇಮಕಾತಿ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶಗಳಿಂದ ಬಾಧಿತರಾದವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮತ್ತು ಘನ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಇವುಗಳ ಆಧಾರದ ಮೇಲೆ ಉಚ್ಛನ್ಯಾಯಾಲಯ ಕಳೆದ ನವೆಂಬರ್ 27 ರಂದು ಮಧ್ಯಂತರ ಆದೇಶ ನೀಡಿ ಹೆಚ್ಚಿಸಲಾದ ಮೀಸಲಾತಿ ಪ್ರಮಾಣದಂತೆ ಯಾವುದೇ ನೇಮಕಾತಿಯ ಬಗ್ಗೆ ಘನ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಧಿಸೂಚನೆಗಳನ್ನು ಹೊರಡಿಸಬಾರದೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದಾಗ್ಯೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಮಾಡಲು ಮುಂದಾಗಿರುವುದು ಆತಂಕಕಾರಿ ಎಂದರು.
ಆದರೆ ಈ ಆದೇಶಗಳಿಂದ ಅನೇಕ ವರ್ಷಗಳಿಂದ ಸಾರ್ವಜನಿಕ ನೇಮಕಾತಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಸೂಕ್ತ ಪ್ರಾತಿನಿದ್ಯ ಸಿಗದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಯುವ ಸಮೂಹ ಮತ್ತು ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನನಂದ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಪಂಪಾಪತಿ, ಪ್ರೊ. ಗೋಪಾಲ ಕೃಷ್ಣ ಮತ್ತು ವಾಲ್ಮೀಕಿ ಸಮಾಜದ ಸಂಘಟನೆಗಳ ಮುಖಂಡರು ಹಾಜರಿದ್ದರು.