

ಡೈಲಿ ವಾರ್ತೆ: ಮಾ./07/2026

ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿ – ಚಾಲಕನ ಜಾಗರೂಕತೆಯಿಂದ ತಪ್ಪಿದ ಭಾರಿ ಅನಾಹುತ

ಶಿವಮೊಗ್ಗ: ನಗರದ ಆಲ್ಕೊಳ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನ ಇಂಜಿನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಚಾಲಕನ ಸಮಯಪ್ರಜ್ಞೆ ಹಾಗೂ ಸ್ಥಳೀಯರ ಸಹಕಾರದಿಂದ ಸಂಭವಿಸಬಹುದಾಗಿದ್ದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಗಾಡಿಕೊಪ್ಪ ಕಡೆಯಿಂದ ನಗರದ ಬಸ್ ನಿಲ್ದಾಣದ ಕಡೆಗೆ ಕಾರು ಚಲಿಸುತ್ತಿತ್ತು. ಆಲ್ಕೊಳ ವೃತ್ತದ ಸಮೀಪ ಬರುತ್ತಿದ್ದಂತೆಯೇ ಕಾರಿನ ಇಂಜಿನ್ ಭಾಗದಿಂದ ಏಕಾಏಕಿ ದಟ್ಟವಾದ ಹೊಗೆ ಹೊರಬರಲಾರಂಭಿಸಿದೆ. ತಕ್ಷಣ ಎಚ್ಚೆತ್ತ ಚಾಲಕ ಗಾಡಿಯನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ.
ಬೆಂಕಿ ಕಾಣಿಸಿಕೊಂಡ ಸ್ಥಳದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇತ್ತು. ಬೆಂಕಿ ಮತ್ತಷ್ಟು ವ್ಯಾಪಿಸುವ ಅಪಾಯವನ್ನರಿತ ಬಂಕ್ ಸಿಬ್ಬಂದಿ ಹಾಗೂ ಸ್ಥಳೀಯರು ಕೂಡಲೇ ಅಗ್ನಿಶಾಮಕ ಉಪಕರಣಗಳೊಂದಿಗೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಹಾಗೂ ಪೆಟ್ರೋಲ್ ಬಂಕ್ ಬಳಿಯೇ ಈ ಘಟನೆ ನಡೆದಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.