ಡೈಲಿ ವಾರ್ತೆ: ಮಾ./08/2026

ಬ್ರಹ್ಮಾವರ| ‘ಗರಗರ ಮಂಡಲ’ (ಜುಗಾರಿ ಅಡ್ಡೆಗೆ) ಪೊಲೀಸ್ ದಾಳಿ – 10 ಮಂದಿ ವಶಕ್ಕೆ

​ಬ್ರಹ್ಮಾವರ: ತಾಲೂಕಿನ ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣಕ್ಕಿಟ್ಟು ‘ಗರಗರ ಮಂಡಲ’ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ಬ್ರಹ್ಮಾವರ ಪೊಲೀಸರು ದಾಳಿ ನಡೆಸಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

​ದಿನಾಂಕ 07/03/2026 ರಂದು ರಾತ್ರಿ ಹನೇಹಳ್ಳಿ ಗ್ರಾಮದ ಕೂರಾಡಿ ಮೇಲ್ಪೇಟೆ ನಿವಾಸಿ ಕೇಶವ ಕಲ್ಕುರ ಎಂಬುವರ ಜಾಗದ ಬಳಿ ಇರುವ ಹಾಡಿ ಪ್ರದೇಶದಲ್ಲಿ ಸಾರ್ವಜನಿಕವಾಗಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೀಟ್ ಸಿಬ್ಬಂದಿಯವರಿಂದ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣಾ ಪಿಎಸ್ಐ ರವರ ಸೂಚನೆಯಂತೆ ಎಎಸ್ಐ ವಿಠ್ಠಲ್ ಎಮ್ ಅವರು ಸಿಬ್ಬಂದಿಯವರೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ.

​ದಾಳಿಯ ವೇಳೆ ಸ್ಥಳದಲ್ಲಿದ್ದ ಹರೀಶ್, ಗುರುರಾಜ್, ವೆಂಕಟೇಶ್ ಪೂಜಾರಿ, ಹರ್ಷ, ಸುರೇಶ್ ನಾಯ್ಕ, ರಾಜ ನಾಯ್ಕ, ಪೀಟರ್ ಡಿಮೆಲ್ಲೋ, ನಾಗೇಶ, ನಾಗರಾಜ ಹಾಗೂ ರಾಜೇಶ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಲ್ಲದೆ ​ಜುಗಾರಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳಾದ ಚಿತ್ರಗಳಿರುವ ಫ್ಲೆಕ್ಸ್ ಶೀಟ್, 06 ಮುಖದ ಡೈಸ್ ಕಾಯಿನ್‌ಗಳು, ಪ್ಲಾಸ್ಟಿಕ್ ಡಬ್ಬಿ, ಚೌಕಾಕಾರದ ಮರದ ತುಂಡು ಮತ್ತು ಕ್ಯಾಂಡಲ್‌ಗಳು, ಹಾಗೂ 3 ದ್ವಿಚಕ್ರ ವಾಹನಗಳು, 8 ಮೊಬೈಲ್ ಫೋನ್‌ಗಳನ್ನು
ವಶಪಡಿಸಿಕೊಂಡು ಒಟ್ಟು ಸ್ವತ್ತುಗಳ ಮೌಲ್ಯ ಸುಮಾರು ರೂ. 1,54,100/- ಎಂದು ಅಂದಾಜಿಸಲಾಗಿದೆ.

​ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಅಪರಾಧ ಕ್ರಮಾಂಕ 46/2026 ರಂತೆ ಕಲಂ: 112 BNS ಹಾಗೂ 87 ಕರ್ನಾಟಕ ಪೊಲೀಸ್ ಕಾಯ್ದೆ (Karnataka Police Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.