

ಡೈಲಿವಾರ್ತೆ:15/ಮಾರ್ಚ್/2026


ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ನೂತನ ಆಡಳಿತ ಮಂಡಳಿ ಆಯ್ಕೆ: ಪಂಚ ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟ

ಸಾಲಿಗ್ರಾಮ: ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಳದ 2026–31ನೇ ಸಾಲಿನ ಆಡಳಿತ ಮಂಡಳಿಗೆ ಮಾರ್ಚ್ 15ರಂದು ಚುನಾವಣೆ ನಡೆಯಿತು. ಒಟ್ಟು ಆರು ಮತಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಕರ್ನಾಟಕೇತರ ಭಾರತದ ಇತರ ರಾಜ್ಯಗಳ ಮತಕ್ಷೇತ್ರದಿಂದ ಎಂ. ಲಕ್ಷ್ಮೀನಾರಾಯಣ ಹೊಳ್ಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ ಐದು ಮತಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಈ ಐದು ಕ್ಷೇತ್ರಗಳಿಂದ ಒಟ್ಟು 8 ಮಂದಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದು, ಮತದಾರರು ಉತ್ಸಾಹದಿಂದ ಮತ ಚಲಾಯಿಸಿದರು.
ಉಡುಪಿ ಜಿಲ್ಲೆಯ ಉಳಿದ ಭಾಗಗಳ ಮತಕ್ಷೇತ್ರದಿಂದ ಬೈಂದೂರಿನ ಬಿ. ಚಂದ್ರಶೇಖರ ನಾವಡ ಅವರು ಬಹುಮತದಿಂದ ಆಯ್ಕೆಯಾಗಿದ್ದಾರೆ.

ಬೆಂಗಳೂರು ಕಾರ್ಪೊರೇಷನ್ ಮತಕ್ಷೇತ್ರದಿಂದ ಜಿ. ಪ್ರಕಾಶ ಮಯ್ಯ ಅವರು ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮತಕ್ಷೇತ್ರದಿಂದ ಪ್ರಕಾಶ ಕಾರಂತ ಅವರು ಆಯ್ಕೆಯಾಗಿದ್ದು, ಕರ್ನಾಟಕದ ಉಳಿದ ಭಾಗಗಳ ಮತಕ್ಷೇತ್ರದಿಂದ ಬಿ.ಜಿ. ಕೃಷ್ಣಮೂರ್ತಿ ಅವರು ಬಹುಮತದಿಂದ ಜಯಗಳಿಸಿದ್ದಾರೆ.

ಇದಲ್ಲದೆ ಸಾಲಿಗ್ರಾಮ ಮತಕ್ಷೇತ್ರದಿಂದ ಪ್ರಸನ್ನ ತುಂಗ, ಪರಶುರಾಮ ಭಟ್ಟ, ಕೆ. ತಾರಾನಾಥ ಹೊಳ್ಳ ಹಾಗೂ ಚಂದ್ರಶೇಖರ ಉಪಾಧ್ಯ ಅವರುಗಳು ಬಹುಮತದಿಂದ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಆಯ್ಕೆಯಾದ ಸದಸ್ಯರಿಗೆ ಭಕ್ತರು ಮತ್ತು ಸ್ಥಳೀಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.