ಡೈಲಿವಾರ್ತೆ:15/ಮಾರ್ಚ್/2026

ಹೊನ್ನಾವರ| ಕೆಎಸ್‌ಆರ್‌ಟಿಸಿ
ಬಸ್‌, ಓಮಿನಿ ನಡುವೆ ಭೀಕರ ಅಪಘಾತ – ಚಾಲಕ ದುರ್ಮರಣ

ಹೊನ್ನಾವರ, ಮಾ.15: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಓಮಿನಿ ವಾಹನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓಮಿನಿ ಚಾಲಕ ಮೃತಪಟ್ಟ ದುರ್ಘಟನೆ ರವಿವಾರ ಸಂಜೆ ಹೊನ್ನಾವರ ತಾಲೂಕಿನ ಹೆರಂಗಡಿ ಸಮೀಪ ಸಂಭವಿಸಿದೆ.

ಮೃತರನ್ನು ಸಿದ್ದಾಪುರ ಮೂಲದ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಇಬ್ರಾಹಿಂ ಅವರು ಭಟ್ಕಳದಿಂದ ಸಿದ್ದಾಪುರದತ್ತ ಓಮಿನಿ ವಾಹನ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ, ಗೇರುಸೊಪ್ಪದಿಂದ ಹೊನ್ನಾವರದತ್ತ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೆರಂಗಡಿ ಸಮೀಪ ಎದುರುಬಂದಾಗ ಇಬ್ಬರ ನಡುವಿನ ಭೀಕರ ಢಿಕ್ಕಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಓಮಿನಿ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕ ಇಬ್ರಾಹಿಂ ಅವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಹಾಗೂ ಪೊಲೀಸರು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.