ಡೈಲಿವಾರ್ತೆ:02/ಏಪ್ರಿಲ್ /2026

ಮಣಿಪಾಲ: ಆಸ್ಪತ್ರೆ ಮುಂಭಾಗದಲ್ಲೇ ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯ ಅಪಹರಣ – ಬೆಚ್ಚಿಬಿದ್ದ ಸಾರ್ವಜನಿಕರು!

​ಮಣಿಪಾಲ: ಇಲ್ಲಿನ ಪ್ರಸಿದ್ಧ ಆಸ್ಪತ್ರೆಯ ಮುಂಭಾಗದ ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಏಳೆಂಟು ಮಂದಿಯ ತಂಡವೊಂದು ಹಾಡಹಗಲೇ ಅಪಹರಿಸಿರುವ ಘಟನೆ ನಡೆದಿದೆ.

​ಘಟನೆಯ ವಿವರ:
ಕೊಡ್ಲಾಡಿ ಗ್ರಾಮದ ನಿವಾಸಿ ರಾಮ ಮಡಿವಾಳ ಅವರು ತಮ್ಮ ಸಹೋದರ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲದ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಮತ್ತೋರ್ವ ಸಹೋದರ ರಾಜೇಶ್ ಹಾಗೂ ಸುಧೀರ್ ಎಂಬುವವರ ಜೊತೆ ಆಸ್ಪತ್ರೆಯ ಹೊರಗಿನ ಕ್ಯಾಂಟೀನ್‌ನಲ್ಲಿ ಚಹಾ ಸೇವಿಸುತ್ತಿದ್ದರು.
​ಅದೇ ಸಮಯದಲ್ಲಿ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸೆಲ್ಟಾಸ್ ಕಾರಿನಲ್ಲಿ ಬಂದ ಏಳೆಂಟು ಮಂದಿ ಅನಿರೀಕ್ಷಿತವಾಗಿ ರಾಜೇಶ್ ಅವರ ಮೇಲೆರಗಿ, ಬಲತ್ಕಾರವಾಗಿ ಕಾರಿನೊಳಗೆ ತುೂಕಿ ಮಣಿಪಾಲದಿಂದ ಹಿರಿಯಡಕ ಮಾರ್ಗವಾಗಿ ಪರಾರಿಯಾಗಿದ್ದಾರೆ.

​ಹಳೇ ವ್ಯವಹಾರವೇ ಕಾರಣ?
ಅಪಹರಣಕಾರರನ್ನು ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಹಾಗೂ ವಿಜಯ್ ಎಂದು ಗುರುತಿಸಲಾಗಿದೆ. ಈ ತಂಡವು ಈ ಹಿಂದೆ ತೆಲಂಗಾಣದಲ್ಲಿನ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ರಾಜೇಶ್ ಅವರ ಮನೆಗೆ ಬಂದು ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಇದೇ ವ್ಯವಹಾರದ ಹಳೇ ದ್ವೇಷ ಅಥವಾ ಹಣಕಾಸಿನ ವಿಚಾರಕ್ಕಾಗಿ ಈ ಕಿಡ್ನಾಪ್ ನಡೆದಿದೆ ಎಂಬ ಸಂಶಯ ವ್ಯಕ್ತವಾಗಿದೆ.

​ಸದ್ಯ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ನಡೆದ ಈ ಕೃತ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.