ಡೈಲಿವಾರ್ತೆ:15/ಏಪ್ರಿಲ್ /2026

ಮಂಗಳೂರು: ಕ್ರಿಕೆಟ್ ಆಟದ ವೇಳೆ ವಿದ್ಯುತ್ ಸ್ಪರ್ಶ – ಎಸೆಸೆಲ್ಸಿ ವಿದ್ಯಾರ್ಥಿ ದಾರುಣ ಸಾವು

ಮಂಗಳೂರು: ನಗರದ ಮಹಾಕಾಳಿಪಡ್ಪು ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ವಿದ್ಯುತ್ ತಂತಿ ತಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಮೃತ ಬಾಲಕನನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಲದ, ಪ್ರಸ್ತುತ ಮಹಾಕಾಳಿಪಡ್ಪುವಿನ ನಿರ್ಮಲ ನಗರ ನಿವಾಸಿ ವರುಣ್ (15) ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ಮಹಾಕಾಳಿಪಡ್ಪು ಅಂಡರ್‌ಪಾಸ್ ಸಮೀಪದ ಭಜನ ಮಂದಿರದ ಬಳಿಯಲ್ಲಿ ವರುಣ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದನು. ಆಟದ ವೇಳೆ ಚೆಂಡು ಮಂದಿರದ ಛಾವಣಿಯ ಮೇಲೆ ಬಿದ್ದಿತ್ತು. ಚೆಂಡನ್ನು ತಂದುಕೊಡಲು ಛಾವಣಿಗೆ ಏರಿದ ವರುಣ್‌ಗೆ ಅಲ್ಲಿ ಹಾದುಹೋಗುತ್ತಿದ್ದ ವಿದ್ಯುತ್ ತಂತಿ ಆಕಸ್ಮಿಕವಾಗಿ ತಾಗಿದೆ ಎನ್ನಲಾಗಿದೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ವರುಣ್ ತಂದೆ ಕಣ್ಣನ ಗೌಡ ಅವರು ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಕುಟುಂಬವನ್ನು ಪೋಷಿಸುತ್ತಿದ್ದರು. ವರುಣ್ ಇತ್ತೀಚೆಗೆ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದನು. ರಜೆಯ ಸಂಭ್ರಮದಲ್ಲಿದ್ದ ಬಾಲಕನ ಆಕಸ್ಮಿಕ ಮರಣ ಕುಟುಂಬಸ್ಥರನ್ನು ದುಃಖದ ಸಾಗರಕ್ಕೆ ತಳ್ಳಿದೆ.