ಡೈಲಿವಾರ್ತೆ:23/ಆಗಸ್ಟ್ /2026

ಪಾಗಲ್ ಪ್ರೇಮಿಯ ಕಿರುಕುಳ – ಸಾಗರದ ಯುವತಿ ಕೆರೆಗೆ ಹಾರಿ ಆತ್ಮಹತ್ಯೆ

ಬೆಂಗಳೂರು: ಪಾಗಲ್‌ ಪ್ರೇಮಿಯ ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಸಾಗರ ತಾಲೂಕಿನ ಬೆಳಮಕ್ಕಿ ಗ್ರಾಮದ ಯುವತಿಯೊಬ್ಬಳು ಬೆಂಗಳೂರಲ್ಲಿ ಹೆಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿಯ ಅಗರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಯುವತಿ ವಾಣಿ (22 ) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆಗೂ ಮುನ್ನ ವಾಣಿ ಡೆತ್‌ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಕ್ಲಾಸ್‌ಮೇಟ್‌ ಅಭಿಷೇಕ್‌ ಎಂಬಾತನ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾಳೆ.

ಅಭಿಷೇಕ್‌ ಯುವತಿಗೆ ವಾಟ್ಸಪ್‌ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಬ್ಲಾಕ್‌ಮೇಲ್‌ ಮಾಡುತಿದ್ದ. ಕರೆದಾಗಲೆಲ್ಲ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದ. ನಮ್ಮ ಕುಟುಂಬದ ಮರ್ಯಾದೆ ಹೋಗಬಾರದು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಭಿಷೇಕ್‌ಗೆ ಶಿಕ್ಷೆ ಆಗಬೇಕು ಎಂದು ಡೆತ್‌ನೋಟ್‌ನಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.

ಕಾಲೇಜು ದಿನಗಳಲ್ಲಿ ವಾಣಿ ಮತ್ತು ಅಭಿಷೇಕ್ ಒಟ್ಟಿಗೆ ಓದುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ಯುವತಿ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದಳು. ಚಿನ್ನದ ಅಂಗಡಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಹೆಚ್‌ಎಸ್‌ಆರ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಭಿಷೇಕ್‌ನನ್ನು ಪೊಲೀಸರು ಹುಡುಕುತ್ತಿದ್ದಾರೆ.