ಡೈಲಿವಾರ್ತೆ:16/ಸೆ./2026

ಮಣಿಪಾಲ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಖಾಸಗಿ ದೂರಿನ ಬಳಿಕ ಯುವಕನ ಬಂಧನ

ಉಡುಪಿ: ಮಣಿಪಾಲದ WGSHA ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ಮೂಲದ ವಿದ್ಯಾರ್ಥಿನಿ ಪೌಲಾ ಲೆಸ್ಲಿ ವಾರ್ಜ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರ ಖಾಸಗಿ ದೂರಿನ ಬಳಿಕ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ, ಮೃತ ವಿದ್ಯಾರ್ಥಿನಿಯ ತಂದೆ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರು ನೀಡಿದ ಖಾಸಗಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಪೌಲಾ ಲೆಸ್ಲಿ ವಾರ್ಜ್ರಿ ಅವರು 2025ರ ನವೆಂಬರ್ 7ರ ರಾತ್ರಿ 11.45ರಿಂದ ನವೆಂಬರ್ 8ರ ಬೆಳಗ್ಗೆ 8.40ರ ನಡುವಿನ ಅವಧಿಯಲ್ಲಿ ಮಣಿಪಾಲದ ಕಾಯಿನ್ ಸರ್ಕಲ್ ಸಮೀಪದ ಐರಿಸ್ ಪ್ಲಾಜಾ ಕಟ್ಟಡದ 504ನೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಯುಡಿಆರ್ ನಂ.45/2025ರಂತೆ ಪ್ರಕರಣ ದಾಖಲಾಗಿತ್ತು. ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಬಳಿಕ ಮೃತೆಯ ಆಪಲ್ ಐಪ್ಯಾಡ್, ಐಫೋನ್, ಡೈರಿ ಹಾಗೂ ಇತರ ಡಿಜಿಟಲ್ ದಾಖಲೆಗಳನ್ನು ಕುಟುಂಬದವರ ವಶಕ್ಕೆ ನೀಡಲಾಗಿತ್ತು.

ಮೃತೆಯ ಸಾಧನಗಳು ಹಾಗೂ ಡೈರಿಯನ್ನು ಪರಿಶೀಲಿಸಿದ ವೇಳೆ ಸಾಯಿ ಭಿಂಗಾರೆ @ ಸಾಯಿ ಪಾಟೀಲ್ ಎಂಬಾತನೊಂದಿಗೆ ಸ್ನ್ಯಾಪ್‌ಚಾಟ್ ಮೂಲಕ ನಡೆದಿದ್ದ ಸಂವಹನದ ದಾಖಲೆಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಯುವಕನಿಂದ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ನಡೆದಿರಬಹುದೆಂಬ ಅನುಮಾನ ವ್ಯಕ್ತಪಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬದವರು ಮನವಿ ಮಾಡಿದ್ದರು.

ಈ ದೂರಿನ ಆಧಾರದ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ಸಂಖ್ಯೆ 90/2026 ಅನ್ನು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 308(5)ರಂತೆ ದಾಖಲಿಸಿಕೊಳ್ಳಲಾಗಿತ್ತು.

ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರು ತನಿಖೆ ಕೈಗೊಂಡಿದ್ದು, ಪ್ರಕರಣದ ಆರೋಪಿ ಎಂದು ಹೆಸರಿಸಲಾದ ಸಾಯಿ ಸಂಜಯ್ ಬಿಂಗಾರೆ (21), ತಂದೆ ಸಂಜಯ್ ಬಿಂಗಾರೆ, ಅಲೋಕ್ ಸಿಟಿ ಸೈಲಿ, ದಾದ್ರ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶ ಎಂಬಾತನನ್ನು ಸೆಪ್ಟೆಂಬರ್ 9, 2026ರಂದು ಬಂಧಿಸಿದ್ದಾರೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.