ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ:13 ಫೆಬ್ರವರಿ 2023

ತೋಟದಲ್ಲಿ ಆಟವಾಡುತ್ತಿದ್ದಾಗ ಹುಲಿ ದಾಳಿ: 12 ವರ್ಷದ ಬಾಲಕ ಬಲಿ!

ಕೊಡಗು: ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ ಗ್ರಾಮದ ಪಲ್ಲೇರಿ ಎಂಬಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.

ಸಂಜೆ ಸುಮಾರು 4 ಗಂಟೆಗೆ ಹುಲಿ ದಾಳಿ: ತೋಟದಲ್ಲಿ ಸಂಜೆ ಸುಮಾರು 4 ಗಂಟೆಗೆ ಹುಲಿ ದಾಳಿ ಮಾಡಿ ಬಾಲಕನ ಜೀವ ತೆಗೆದಿರುವ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಹುಲಿ ಅಲ್ಲಿಂದ ಪರಾರಿಯಾಗಿದೆ. ಇನ್ನು ಬಾಲಕನ ಮೃತದೇಹವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕನ್ನು ಕಳೆದುಕೊಂಡ ಕಾರ್ಮಿಕ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಹುಲಿ ದಾಳಿಯ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದು, ಒಬ್ಬಂಟಿಯಾಗಿ ಯಾರೊಬ್ಬರೂ ಸಂಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಹುಲಿಯನ್ನು ಸೆರೆ ಹಿಡಿಯಲು ಬೋನು ಅಳವಡಿಕೆ ಮಾಡಿದ್ದಾರೆ.

ಕುಟ್ಟ ಗ್ರಾಮದ ಪಾಲ್ಲೇರಿ ಎಂಬಲ್ಲಿ ಹುಲಿ ದಾಳಿಗೆ ಬಲಿಯಾದ ಬಾಲಕ ಚೇತನ್ (12) ಎಂದು ಗುರುತಿಸಲಾಗಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಂದಿದ್ದ ಪಂಚವಳ್ಳಿ ಮೂಲದ ಕಾರ್ಮಿಕ ಹುಡುಗ ಆಗಿದ್ದಾನೆ. ಇವನು ತೋಟದ ಒಳಗೆ ಆಟ ಆಡುತ್ತಿದ್ದ ವೇಳೆ ಬಾಲಕನ ಮೇಲೆ ಹುಲಿ ದಾಳಿ ಮಾಡಿದೆ.