ಡೈಲಿ ವಾರ್ತೆ:14 ಫೆಬ್ರವರಿ 2023

ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಉಡುಪಿ: ಕೆಲ ದಿನಗಳ ಹಿಂದೆ ಪಾಂಗಾಳದಲ್ಲಿ ನಡೆದ ಶರತ್ ಶೆಟ್ಟಿ (39) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚೀಂದ್ರ ತಿಳಿಸಿದ್ದಾರೆ.

ಸುರತ್ಕಲ್ ಕುಳಾಯಿಯ ದಿನೇಶ್ ಶೆಟ್ಟಿ (20) ಮತ್ತು ಲಿಖಿತ್ ಕುಲಾಲ್ (21), ಆಕಾಶ್ ಕರ್ಕೇರ(24), ಪ್ರಸನ್ನ ಶೆಟ್ಟಿ (40) ಬಂಧಿತ ಆರೋಪಿಗಳು. ಇವರಲ್ಲಿ ದಿವೇಶ್ ಮತ್ತು ಲಿಖಿತ್‌ನನ್ನು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆಕಾಶ್ ಮತ್ತು ಪ್ರಸನ್ನ ಶೆಟ್ಟಿಯನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ, ನಾಗರಾಜ್, ಭೂಗತ ಪಾತಕಿ ಕಲಿ ಯೋಗೀಶ್ ಮತ್ತು ಕೃತ್ಯಕ್ಕೆ ಸಹಕರಿಸಿದ ಮುಕೇಶ್ ಹಾಗೂ ಇತರ ಆರೋಪಿಗಳ ಶೋಧ ಕಾರ್ಯ ಮುಂದುವರೆಸಲಾಗಿದೆ. ಪಾಂಗಾಳದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ಡಿಸೆಂಬರ್ ತಿಂಗಳಲ್ಲಿ ಯೋಗೀಶ್ ಆಚಾರ್ಯ ಹಾಗೂ ಭರತ್ ಶೆಟ್ಟಿ ಹೋಗಿದ್ದು, ಈ ವೇಳೆ ಕೆಲವು ವ್ಯಕ್ತಿಗಳು ಯೋಗೀಶ್ ಆಚಾರ್ಯನಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ಶರತ್ ಶೆಟ್ಟಿ, ಯೋಗೀಶ್ ಸಹಾಯಕ್ಕೆ ಬಾರದೆ ಸ್ಥಳದಿಂದ ಓಡಿಹೋಗಿದ್ದನು. ಇದೇ ದ್ವೇಷದಿಂದ ಯೋಗೀಶ್ ಆಚಾರ್ಯ, ಭೂಗತ ಪಾತಕಿ ಕಲಿ ಯೋಗೀಶನನ್ನು ಸಂಪರ್ಕಿಸಿ ಕೊಲೆಗೆ ಸಂಚು ರೂಪಿಸಿದ್ದನು ಎಂದು ಅವರು ತಿಳಿಸಿದರು.