ಡೈಲಿ ವಾರ್ತೆ:29 ಮಾರ್ಚ್ 2023

ಚಿಕ್ಕಮಗಳೂರು:ಹಾಡಹಗಲೇ ಬಾಲಕನ ಕಿಡ್ನಾಪ್ ಗೆ ಯತ್ನ: ಚಾಣಾಕ್ಷತೆ ಮೆರೆದು ತಪ್ಪಿಸಿಕೊಂಡ ಬಾಲಕ ( ವಿಡಿಯೋ ವೀಕ್ಷಿಸಿ)

ಚಿಕ್ಕಮಗಳೂರು : ಹಾಡ ಹಗಲೇ ಪುಟ್ಟ ಬಾಲಕನನ್ನು ಅಪಹರಿಸಲು ವಿಫಲ ಯತ್ನ ನಡೆದಿದೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಗೆ ಬಾಲಕನ ಅಪಹರಣಕ್ಕೆ ಯತ್ನ ನಡೆದಿದೆ.

ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಒಬ್ಬ ಅಪರಿಚಿತ ಯತ್ನಿಸಿದ್ದಾನೆ.

ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಮುನ್ನಡೆದಿದ್ದು, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ಎಸ್ಕೇಪ್‌ ಆಗಿದ್ದಾನೆ.‌
ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯಸ್ಫೂರ್ತಿಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಿನಿಮಿಯ ರೀತಿಯಲ್ಲಿ ನಡೆದಿರುವ ಈ ಘಟನೆ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ಫಕ್ಕನೆ ಯಾರ ಗಮನಕ್ಕೂ ಬಂದಿಲ್ಲ.
ಅಪಹರಣಕ್ಕೆ ಯತ್ನಿಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯ ಹೊರಗೆ ಆಡುತ್ತಿರುತ್ತಾರೆ. ಮಕ್ಕಳನ್ನು ಹೊರಗೆ ಬಿಡುವ ಮುನ್ನ ಪೋಷಕರು ಹುಷಾರಾಗಿರುವಂತೆ ಈ ಘಟನೆ ಎಚ್ಚರಿಸಿದೆ.