ಡೈಲಿ ವಾರ್ತೆ: 04 ಜೂನ್ 2023

ಕುಂಭಾಸಿ ವೆಂಕಟೇಶ ಭಟ್ ನಿಧನ

ಕುಂದಾಪುರ : ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲೊಂದಾದ ಕುಂಭಾಸಿಯ ಪ್ರಸಿದ್ಧ ಶ್ರೀ ಹರಿಹರ ಮಹಾಲಿಂಗೇಶ್ವರ ದೇವಾಲಯದ ಅನುವಂಶೀಯ ಆಡಳಿತ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕ, ಕೋಟೇಶ್ವರ ಮಾಗಣೆಯ ಹಿರಿಯ ಪುರೋಹಿತ ವೇದಮೂರ್ತಿ ಕೆ. ವೆಂಕಟೇಶ ಭಟ್ (75) ಜೂನ್ 3ರ ಶನಿವಾರ ರಾತ್ರಿ ಕುಂಭಾಸಿಯ ಸ್ವಗೃಹದಲ್ಲಿ ನಿಧನರಾದರು.

ಪ್ರತಿಷ್ಠಿತ ಮಾಲಾಡಿ ಭಟ್ಟ ಕುಟುಂಬದ ಹಿರಿಯರಲ್ಲೋರ್ವರಾದ ಇವರು ಕುಂಭಾಸಿ ಶ್ರೀ ಹರಿಹರ ದೇವಾಲಯದ ಅಭಿವೃದ್ಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.

ದೇವಳದ ತಂತ್ರಿಗಳಾಗಿಯೂ ಕಾರ್ಯನಿರ್ವಹಿಸುತ್ತಿ ದ್ದ ಇವರು, ಉಡುಪಿಯ ಮಠಾಧೀಶರು, ಹಲವು ಸಂಘ -ಸಂಸ್ಥೆಗಳಿಂದಲೂ ಸನ್ಮಾನಗೊಂಡಿದ್ದರು.
ಇವರು ಪತ್ನಿ, ಪುತ್ರ ವೇದಮೂರ್ತಿ ನಾಗರಾಜ ಭಟ್, ಮೂವರು ಪುತ್ರಿಯರನ್ನು ಅಗಲಿದ್ದಾರೆ. ವೆಂಕಟೇಶ ಭಟ್ಟರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪುರೋಹಿತ ವರ್ಗದವರು, ಜ್ಯೋತಿಷ್ಯ ವಿದ್ವಾನ್ – ಪಂಚಾಂಗಕರ್ತ ಶ್ರೀಪತಿ ಉಪಾಧ್ಯಾಯ, ಅರ್ಚಕ ಗಡಣ, ಉದ್ಯಮಿಗಳು, ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಹಿರಿಯ ಅನುವಂಶಿಕ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಲಕ್ಷ್ಮೀನಾರಾಯಣ ವೈದ್ಯ ಇನ್ನಿತರರು ನಿವಾಸಕ್ಕಾಗಮಿಸಿ ಅಂತಿಮ ನಮನ ಸಲ್ಲಿಸಿದರು.