ಡೈಲಿ ವಾರ್ತೆ:05 ಜೂನ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಶಿವಮೊಗ್ಗ: ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

ಶಿವಮೊಗ್ಗ: ಮದ್ಯ ಸೇವಿಸುವ ವಿಷಯಕ್ಕೆ ಬಾರ್ ನಲ್ಲಿ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ಜಿಲ್ಲೆಯ ಆಯುನೂರುನಲ್ಲಿ ನಡೆದಿದೆ.

ಸಚಿನ್ (27) ಕೊಲೆಯಾದ ಯುವಕ. ಈತ ಬಾರ್ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದನು.

ಶಿವಮೊಗ್ಗ ತಾಲೂಕಿನ ಆಯನೂರಿನ ನವರತ್ನ ಬಾರ್ ನಲ್ಲಿ ಈ ಗಲಾಟೆ ನಡೆದಿದ್ದು . ನಿರಂಜನ, ಸತೀಶ್ ಹಾಗೂ ಅಶೋಕ್ ನಾಯ್ಕ್ ಕೊಲೆ ಮಾಡಿದ ಆರೋಪಿಗಳು.

ಈ ಹಿಂದೆ ಹಣ ನೀಡದೇ ಮದ್ಯ ಖರೀದಿಸಿದ್ದ ಆರೋಪಿಗಳು. ಹೀಗಾಗಿ ಬಾರ್ ಬಳಿ ಬಂದಾಗ ಕ್ಯಾಶಿಯರ್ ಹಣ ಕೇಳಿದ್ದಾರೆ. ಎಲ್ಲಾ ಜನರ ಎದುರು ಹಣ ಕೇಳುತ್ತೀಯಾ ಅಂತಾ ಗಲಾಟೆ ಮಾಡಿದ್ದರು. ಬಳಿಕ ಮೂವರು ಆರೋಪಿಗಳು ಭಾನುವಾರ ರಾತ್ರಿ 10 ಗಂಟೆಗೆ ಬಾರ್ ಗೆ ಕುಡಿಯಲು ಬಂದಿದ್ದರು. ರಾತ್ರಿ 11.30 ಆದರೂ ಆರೋಪಿಗಳು ಮದ್ಯ ಸೇವಿಸುತ್ತಲೇ ಇದ್ದರು. ಈ ವೇಳೆ ಸಚಿನ್, 11.30 ಆಯ್ತು ಬಂದ್ ಮಾಡ್ತೇವೆ ಹೊರಡಿ ಎಂದು ಹೇಳಿದ್ದಾರೆ. ಆಗ ನಮ್ದು ಇನ್ನು ಕುಡಿದು ಮುಗಿದಿಲ್ಲ, ನಾವು ಹೋಗಲ್ಲ ಏನ್ ಮಾಡ್ತೀಯಾ ಅಂತಾ ಗಲಾಟೆ ಮಾಡಿದ್ದಾರೆ. ಆಗ ಬಾರ್‌ನ ಅಸಿಸ್ಟೆಂಟ್‌ ಕ್ಯಾಶಿಯರ್‌ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುತ್ತಿದ್ದಂತೆ ಕ್ಯಾಶಿಯರ್‌ ಸಚಿನ್‌ ವಿರುದ್ಧ ಮೂವರು ಯುವಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ.
ಈ ಪೈಕಿ ಓರ್ವ ಯುವಕ ಬಿಯರ್‌ ಬಾಟಲಿಯನ್ನು ತಲೆಗೆ ಹೊಡದುಕೊಂಡು ಬಾರ್‌ ಸಿಬ್ಬಂದಿಗೆ ಚುಚ್ಚಲು ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಸಿಸ್ಟೆಂಟ್‌ ಕ್ಯಾಶಿಯರ್‌ ಅರುಣ್‌ ಕುಮಾರ್‌ ಕೈಗೆ ಸಣ್ಣ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಡ್ರ್ಯಾಗರ್‌ ತೆಗೆದು ಕ್ಯಾಶಿಯರ್‌ ಸಚಿನ್‌ ಎದೆಯ ಬಲಭಾಗಕ್ಕೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಚಿನ್‌ನನ್ನು ಬಾರ್‌ ಸಿಬ್ಬಂದಿ ತಕ್ಷಣ ಆಯನೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ 108 ಆಂಬುಲೆನ್ಸ್‌ನಲ್ಲಿ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಸಚಿನ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.