ಡೈಲಿ ವಾರ್ತೆ:19 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ವಂದಿಗೆಯ ಆಗೇರ ಕಾಲೋನಿಯ ಅಂಬೇಡ್ಕರ್ ಭವನದ ಹಿಂಭಾಗದ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು, ಸಂಪೂರ್ಣ ಮನೆ ಹಾನಿಗೊಂಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.

ಆಗೇರಿ ಕಾಲೋನಿಯ ಗೌರಿ ಬೊಮ್ಮಯ್ಯ ಆಗೇರ ಎನ್ನುವವರ ಮನೆ ಹಾನಿಯಾಗಿರುವುದು. ಹೊಸದಾಗಿ ನಿರ್ಮಿಸಿದ ಮನೆಯಾಗಿದ್ದು, ಮರ ಉರುಳಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳು ಮತ್ತು ಮನೆಯ ಗೋಡೆಗಳು ಜಕಂಗೊಂಡಿದೆ. ಮರ ಬೀಳುವ ವೇಳೆ ಗೌರಿ, ಅವರ ಮಗ, ಮೊಮ್ಮಗ ಇದ್ದರು. ಗೌರಿ ಮೊಮ್ಮಗನಿಗೆ ಹೆಂಚು ಬಿದ್ದು ಗಾಯವಾಗಿದೆ.

ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ಘಟನಾ ಸ್ಥಳವನ್ನು ಪರಿಶೀಲಿಸಿ, ಮನೆಯ ಸದಸ್ಯರಿಗೆ ತಾತ್ಕಾಲಿಕವಾಗಿ ಪಕ್ಕದ ಅಂಬೇಡ್ಕರ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಮಾತನಾಡಿದ ಅವರು ತುರ್ತಾಗಿ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸುತ್ತೇನೆ ಎಂದರು.
ಕಂದಾಯ ನಿರೀಕ್ಷ ರಾಘವೇಂದ್ರ ಜನ್ನು, ಗ್ರಾಮ ಲೆಕ್ಕಾಧಿಕಾರಿ ಲಕ್ಷ್ಮೀ ದೊಡ್ಮನೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸಂಘಟನಾಧಿಕಾರಿ ಡಿ.ಎಲ್.ರಾಠೋಡ, ಸಿಬ್ಬಂದಿಗಳಾದ ವಿಷ್ಣು ಗೌಡ, ಉಮಾಕಾಂತ ನಾಯ್ಕ, ಮಾಜಿ ಉಪಾಧ್ಯಕ್ಷೆ ರೇಖಾ ಗಾಂವಕರ, ವಂದಿಗೆ ಗ್ರಾಪಂ.ಮಾಜಿ ಅಧ್ಯಕ್ಷ ನಾರಾಯಣ ನಾಯಕ ಉಪಸ್ಥಿತರಿದ್ದರು.