ಡೈಲಿ ವಾರ್ತೆ:21 ಜುಲೈ 2023

ಬೆಂಗಳೂರು ಪೊಲೀಸರಿಂದ ಖತರ್ನಾಕ್ ಕಳ್ಳನ ಬಂಧನ – ಆರೋಪಿಯಿಂದ 8.5 ಲಕ್ಷ ರೂ. ಮೌಲ್ಯದ ವಾಹನಗಳ ಜಪ್ತಿ

ಬೆಂಗಳೂರು: ನಗರದ ನಂದಿನಿ ಲೇಔಟ್ ಪೊಲೀಸರು ವಾಹನ ಕಳ್ಳತನ‌‌ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಚಂದ್ರಕಾಂತ್ ಎಂದು ಗುರುತಿಸಲಾಗಿದೆ.

ಆರೋಪಿ ಚಂದ್ರಕಾಂತ್ನನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸಿದ್ದು, ಒಂದು ಆಟೋರಿಕ್ಷಾ ಹಾಗೂ 13 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
8.5 ಲಕ್ಷ ರೂ. ಮೌಲ್ಯದ ವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ. ಖದೀಮನನ್ನು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ಇನ್ನು 14 ಪ್ರಕರಣಗಳು ಬೆಳಕಿಗೆ ಬಂದಿದೆ.

ನಂದಿ‌ನಿ ಲೇಔಟ್, ವಿಜಯನಗರ, ಹೆಬ್ಬಾಳ,‌ ಬಾಗಲಗುಂಟೆ ಸೇರಿದಂತೆ ಎಂಟಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಈ ಹಿಂದೆ ಜೈಲಿಗೆ ಹೋಗಿ ಬಂದರೂ ಮತ್ತೆ ಅದೇ ಕೆಲಸವನ್ನು ಮುಂದುವರಿಸಿದ್ದನು. ಸದ್ಯ ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.