ಡೈಲಿ ವಾರ್ತೆ:18 ಆಗಸ್ಟ್ 2023

ಆಸ್ತಿಗಾಗಿ ತನ್ನ ಪತಿಯನ್ನೇ ಉಪ್ಪಿಟ್ಟಿನಲ್ಲಿ ವಿಷ ಹಾಕಿ ಕೊಲ್ಲಲು ಯತ್ನಿಸಿದ ಪತ್ನಿ.!

ಬೆಳಗಾವಿ: ಪತಿಯ ಹೆಸರಲ್ಲಿರುವ 2 ಎಕ್ರೆ ಜಮೀನನ್ನು ಮಹಿಳೆಯೊಬ್ಬಳು ತನ್ನ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ಪತಿಗೆ ಉಪ್ಪಿಟ್ಟಿನಲ್ಲಿ ವಿಷ ಬೆರಸಿ ಕೊಲೆಗೆ ಯತ್ನಿಸಿದ ಘಟನೆ ಸವದತ್ತಿಯ ಗೋರಾಬಾಳದಲ್ಲಿ ನಡೆದಿದೆ.

ಆರೋಪಿ ಮಹಿಳೆ ಸಾವಕ್ಕ (32) ಎಂದು ತಿಳಿದುಬಂದಿದೆ.

ಈಕೆ ತನ್ನ ಪತಿಗೆ ಬೆಳಗ್ಗೆ ಉಪ್ಪಿಟನ್ನು ಕೊಟ್ಟಿದ್ದಳು.
ಅದನ್ನು ತಿಂದು ಸ್ವಲ್ಪ ಸಮಯದ ಬಳಿಕ ನಿಂಗಪ್ಪ ಹಮಾನಿಗೆ (35) ತೀವ್ರ ಹೊಟ್ಟೆ ಕಾಣಿಸಿಕೊಂಡಿದ್ದು ತಕ್ಷಣ ಆತನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

ನಿಂಗಪ್ಪ ಹಮಾನಿಯು ವಿಷ ಆಹಾರ ಸೇವಿಸಿರುವ ವಿಚಾರವನ್ನು ವೈದ್ಯರು ಪರೀಕ್ಷಿಸಿ ತಿಳಿಸಿದ್ದು ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ನಿಂಗಪ್ಪನಿಗೆ ನೀಡಿದ್ದ ಉಪ್ಪಿಟ್ಟನ್ನು ನಾಯಿ ಹಾಗೂ ಬೆಕ್ಕು ತಿಂದು ಸತ್ತು ಹೋಗಿದ್ದರಿಂದ ಉಪ್ಪಿಟ್ಟಿನಲ್ಲಿ ವಿಷ ಬೆರೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಹೇಳಿದ್ದಾರೆ.

ನಿಂಗಪ್ಪನವರ ತಂದೆ ಫಕೀರಪ್ಪ ನೀಡಿದ ದೂರಿನಂತೆ ಸಾವಕ್ಕ ಹಾಗೂ ಆಕೆಯ ಸಹೋದರ ಫಕೀರಪ್ಪ ಲಕ್ಷ್ಮಣ ಸಿಂಧೋಗಿ (30) ಇವರಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.